ಅಮಾಸೆಬೈಲಿನಲ್ಲಿ ವಿಶ್ವ ಪರಿಸರ ದಿನ – ಶಾಸಕ ಕೊಡ್ಗಿಯಿಂದ ‘ತಾಯಿ ಹೆಸರಲ್ಲಿ ಒಂದು ಗಿಡ’ ಅಭಿಯಾನಕ್ಕೆ ಚಾಲನೆ

ಕುಂದಾಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5ರ ಶುಕ್ರವಾರ ಅಮಾಸೆಬೈಲಿನ ಸರ್ಕಾರಿ ಪ್ರೌಢಶಾಲಾ ವಠಾರದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಆಗುಂಬೆ ವನ್ಯಜೀವಿ ವಲಯ ಹಾಗೂ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ವಿದ್ಯಾರ್ಥಿಗಳೊಂದಿಗೆ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಆಶಯದಂತೆ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮಕ್ಕಳಿಂದಲೇ ಈ ಜಾಗೃತಿ ಆರಂಭವಾಗಬೇಕು. ಶಾಲಾ ಹಂತದಲ್ಲೇ ಪರಿಸರ ಪ್ರೀತಿ ಬೆಳೆಸಿದರೆ ಹಸಿರು ಕರ್ನಾಟಕದ ಕನಸು ನನಸಾಗುತ್ತದೆ. ನೆಟ್ಟ ಗಿಡಗಳನ್ನು ವಿದ್ಯಾರ್ಥಿಗಳು ತಮ್ಮ ತಾಯಿಯಂತೆ ಆರೈಕೆ ಮಾಡಬೇಕು. ಒಂದು ಗಿಡ ನೆಟ್ಟರೆ ಅದು ಮುಂದಿನ ಪೀಳಿಗೆಗೆ ನಾವು ನೀಡುವ ಅಮೂಲ್ಯ ಕೊಡುಗೆ ಎಂದರು.

ಈ ಸಂದರ್ಭದಲ್ಲಿ ಆಗುಂಬೆ ವನ್ಯಜೀವಿ ವಲಯ ಅಮಾಸೆಬೈಲು ಇದರ ಅರಣ್ಯ ಅಧಿಕಾರಿ ರೂಪೇಶ್ ಶಾಲಾ ಮುಖ್ಯೋಪಾಧ್ಯಯ ನಾಗರಾಜ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೃಷ್ಣಕುಮಾರ್ ಭಾಗವತ್, ಶಾಲಾ ಅಧ್ಯಾಪಕವೃಂದ,ಅರಣ್ಯ ಇಲಾಖೆಯ ಸಿಬ್ಬಂದಿಗಳು,ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ವಿವಿಧ ತಳಿಯ ಗಿಡಗಳನ್ನು ನೆಟ್ಟರು.
