ಬೈಂದೂರು: ಬೈಕಿಗೆ ಲಾರಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಕುಂದಾಪುರ: ಚಲಿಸುತ್ತಿದ್ದ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸರ್ತೆಗೆ ಅಪ್ಪಳಿಸಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಬೈಂದೂರು ಗ್ರಾಮದ ಗಂಗನಾಡು ಬಳಿಯ ಚಂದ್ರಾವತಿ ಎಂಬುವರ ಅಂಗಡಿ ಎದುರಿನ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಬೈಕ್ ಸವಾರ ಮಹಾಬಲ ಪೂಜಾರಿ ಎಂದು ಗುರುತಿಸಲಾಗಿದೆ.

ಮರ ಕಡಿಯುವ ವೃತ್ತಿ ಮಾಡಿಕೊಂಡಿರುವ ಮಹಾಬಲ ಪೂಜಾರಿ ಅವರು ಸೂರ್ಕುಂದದಲ್ಲಿ ಕೆಲಸ ಮುಗಿಸಿ ಸಂಜೆ ಸುಮಾರು 6.30ರ ಸುಮಾರಿಗೆ ತನ್ನ ಬೈಕಿನಲ್ಲಿ ಗಂಗನಾಡು ಕಡೆಯಿಂದ ಬೈಂದೂರು ಕಡೆಗೆ ತನ್ನ ಮನೆಗೆ ಪ್ರಯಾಣಿಸುತ್ತಿದ್ದರು. ಅದೇ ದಿಕ್ಕಿನಲ್ಲಿ ಬೈಕಿನ ಹಿಂದಿನಿಂದ ಬಂದ ರಮೇಶ್ ಎಂಬಾತ ಚಲಾಯಿಸುತ್ತಿದ್ದ ಲಾರಿ ಬೈಕನ್ನು ಓವರ್ ಟೇಕ್ ಮಾಡುವಾಗ ಲಾರಿಯನ್ನು ಎಡಕ್ಕೆ ಚಲಾಯಿಸಿದ ಪರಿಣಾಮ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಬೈಕ್ ಸವಾರ ರಸ್ತೆಗೆ ಬಿದ್ದಿದ್ದು, ಮಹಾಭಲ ಪೂಜಾರಿಯವರ ತಲೆಯ ಮೇಲೆ ಲಾರಿಯ (ಟಿಪ್ಪರ್) ಹಿಂಬದಿಯ ಚಕ್ರ ಹರಿದು ತಲೆ ಬುರಡೆ ಒಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಮಹಾಬಲ ಪೂಜಾರಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
