ಜೂನ್ 1ರಿಂದ ರಾಜ್ಯದಲ್ಲಿ ಮುಂಗಾರು ಲಗ್ಗೆ!? : ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚನೆ
ಕುಂದಾಪುರ: ಬಹು ನಿರೀಕ್ಷಿತ ಮುಂಗಾರು ಜೂನ್ ಆರಂಭಕ್ಕೆ ಕರ್ನಾಟಕಕ್ಕೆ ಲಗ್ಗೆ ಇಡಲಿದೆ ಎನ್ನುವ ಮಾಹಿತಿ ಹವಾಮಾನ ತಜ್ಞರಿಂದ ಲಭ್ಯವಾಗಿದೆ. ಇದರಿಂದಾಗಿ ಸೆಖೆಯಲ್ಲಿ ಬೆಂದ ಜನಕ್ಕೆ ಮುಂಗಾರು ತಂಪನ್ನಿತ್ತರೆ ರೈತರು ನಿಟ್ಟುಸಿರು ಬಿಡಲಿದ್ದಾರೆ.

ಮೇ ಮಧ್ಯಾವಧಿಯಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ಕರ್ನಾಟಕಕ್ಕೆ ಇನ್ನೂ ಪ್ರವೇಶಿಸದ ಕಾರಣ ಮುಂಗಾರು ಮಳೆಯನ್ನೇ ನಂಬಿ ಬೇಸಾಯ ಮಾಡುವ ಲಕ್ಷಾಂತರ ರೈತರು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ. ಭತ್ತದ ಗದ್ದೆಗಳಂತೂ ಒಣಗಿ ಹೋಗಿದ್ದು ಈ ವರ್ಷದ ಬೆಳೆಯ ಮೇಲೆ ದುಷ್ಪರಿಣಾಮ ಬೀರಲಿದೆ.
ಈಗಾಗಲೆ ಮುಂಗಾರು ಕೇರಳ ಪ್ರವೇಶಿಸಿದೆ. ಇನ್ನೊಂದೆರಡು ದಿನಗಳಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಈ ಬಾರಿಯ ಮುಂಗಾರು ಭಾರೀ ಸದ್ಧು ಮಾಡುತ್ತಲೇ ಕರ್ನಾಟಕ ಪ್ರವೇಶಿಸಲಿದ್ದು, ಸಿಡಿಲು ಮಿಂಚುಗಳೊಂದಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.
ನೆರೆ ಹಾಗೂ ತಗ್ಗು ಪ್ರದೇಶಗಳ ಜನರು ನೆರೆ ಭೀತಿ ಎದುರಿಸಬೇಕಾದ ಸಾಧ್ಯತೆ ಇರುವುದರಿಂದ ಮುನ್ನೆಚ್ಚತಿಕೆ ವಹಿಸಬೇಕಿದೆ. ಅಲ್ಲದೇ ಸುರಕ್ಷಿತ ಸ್ಥಳಗಳ ಆಯ್ಕೆ ಮಾಡಿಕೊಳ್ಳಬೇಕಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಶಾಲಾ ಕಾಲೇಜುಗಳ ಆರಂಭದ ಜೊತೆಗೇ ಮುಂಗಾರು ಆರಂಭವಾಗುವುದರಿಂದ ಶಾಲಾ ಆಡಳಿತಮಂಡಳಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಕೈಗೊಳ್ಳುವ ಅಗತ್ಯವಿದೆ.
ಅಪಾಯಕಾರಿ ವಿದ್ಯುತ್ ತಂತಿಗಳು, ತುಂಡಾಗಿ ಬಿದ್ದ ತಂತಿಗಳನ್ನು ಸಾರ್ವಜನಿಕರು ಮುಟ್ಟಬಾರದು, ಅಪಾಯಕಾರಿ ನೀರಿನ ಹರಿವು ಇರುವಲ್ಲಿ ಸಾಹಸಕ್ಕೆ ಮುಂದಾಗಬಾರದು, ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಎಚ್ಚರಿಕೆವಹಿಸಬೇಕು. ಸಮುದ್ರ ತೀರದ ಸಾಹಸ ಬೇಡ. ತೀರಾ ಗಾಳಿ, ಮಿಂಚಿನ ಸಂದರ್ಭ ಮರದಡಿಯಲ್ಲಿ ನಿಲ್ಲದಂತೆ ಎಚ್ಚರಿಕೆವಹಿಸುವಂತೆ ಎಚ್ಚರಿಸಲಾಗಿದೆ.
