ಇಬ್ಬರು ಕೋಕಾ ಆರೋಪಿಗಳ ಬಂಧನ: ಬಾತ್ಮೀದಾರರಿಗೆ 50 ಸಾವಿರ ಬಹುಮಾನ ನೀಡಿದ ಪೊಲೀಸ್ ಇಲಾಖೆ
ಉಡುಪಿ: ಹಣಕ್ಕಾಗಿ ಬೇಡಿಕೆಯಿಟ್ಟು ಕೊಲೆ ಬೆದರಿಕೆ ಹಾಕಿ ಕಿಡ್ನ್ಯಾಪ್ ಮಾಡಿದ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಘೋಷಣೆಯಂತೆ ಮಾಹಿತಿ ನೀಡಿದ ಪೊಲೀಸ್ ಬಾತ್ಮೀದಾರರಿಗೆ ತಲಾ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ವರ್ಷ ನವೆಂಬರ್ 19ರಂದು ಸಿದ್ಧಾಪುರದ ಮೋಹನದಾಸ್ ಶೆಟ್ಟಿ ಎಂಬುವರ ಪುತ್ರ ತೇಜಸ್ ಎಂಬಾತನನ್ನು ಮನೋಜ್ ಕೋಡಿಕೆರೆ ಹಾಗೂ ಚೇತು ಪಡೀಲ್ ಮತ್ತವರ ತಂಡ ಸಾಸ್ತಾನದಲ್ಲಿರುವ ಕೋಸ್ಟಲ್ ಪ್ಯಾರಡೈಸ್ ಹೊಟೇಲ್ ಎದುರು ರಸ್ತೆಯಲ್ಲಿ ಕಿಡ್ನಾಫ್ ಮಾಡಿತ್ತು. ಬಳಿಕ ತೇಜಸ್ ಗೆಳೆಯ ಪ್ರಜ್ವಲ್ ಎಂಬಾತನಿಗೆ ವಾಟ್ಸಾಪ್ ಕರೆ ಮಾಡಿ ಮೂರು ಕೋಟಿ ರೂಪಾಯಿ ನೀಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತೇಜಸ್ ನನ್ನು ದುಷ್ಕರ್ಮಿಗಳಿಂದ ರಕ್ಷಿಸಲಾಗಿತ್ತು. ಆದರೆ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಬಾತ್ಮೀದಾರರು ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳಾದ ಚೇತನ್ ಯಾನೇ ಚೇತು ಪಡೀಲ್ ನನ್ನು ಎಪ್ರಿಲ್ 30ರಂದು ಬಂಧಿಸಿದ್ದು, ಮನೋಜ್ ಕುಲಾಲ್ ಯಾನೇ ಮನೋಜ್ ಕೋಡಿಕೆರೆ ಎಂಬಾತನನ್ನು ಜೂನ್ 11ರಂದು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಬಂಧಿತ ಆರೋಪಿ ಮನೋಜ್ ಕೋಡಿಕೆರೆ ವಿರುದ್ಧ ಉಡುಪಿ ಜಿಲ್ಲೆಯಲ್ಲಿ 2 ಮತ್ತು ಮಂಗಳೂರು ನಗರದಲ್ಲಿ 17 ಪ್ರಕರಣಗಳು, ಒಟ್ಟು 19 ಪ್ರಕರಣ ಗಳು ದಾಖಲಾಗಿದ್ದು, 3 ಕೊಲೆ ಪ್ರಕರಣ, 5 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 10 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ದಾಖಲಾಗಿವೆ. ಆರೋಪಿ ಚೇತನ್ ವಿರುದ್ಧ ಉಡುಪಿಯಲ್ಲಿ 2, ದಕ್ಷಿಣ ಕನ್ನಡ 2 ಮತ್ತು ಮಂಗಳೂರು ನಗರ 9 ಪ್ರಕರಣಗಳು ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿದ್ದು, 2 ಕೊಲೆ, 2 ಕೊಲೆ ಪ್ರಯತ್ನ ಪ್ರಕರಣ, 1 ಅಪಹರಣ ಪ್ರಕರಣ, 2 ಮಾದಕ ದ್ರವ್ಯ ಸೇವನೆ ಮತ್ತು 6 ಹಲ್ಲೆ ಮತ್ತು ದೊಂಬಿ ಪ್ರಕರಣಗಳು ಸೇರಿವೆ.
