ಕೋಟ: ವಿವಾಹಿತ ಮಧ್ಯಮ ವರ್ಗದ ಮಹಿಳೆಗೆ 84 ಲಕ್ಷ ರೂಪಾಯಿ ವಂಚನೆ, ನಿರಂತರ ಅತ್ಯಾಚಾರ ನಡೆಸಿ ಬ್ಲ್ಯಾಕ್ಮೇಲ್ – ದುಷ್ಕರ್ಮಿಯ ಬಂಧನ
ಕೋಟ: ವಾಟ್ಸಾಪ್ ಜಾಲತಾಣದಲ್ಲಿ ವಿವಾಹಿತ ಮಹಿಳೆಯೊಬ್ಬರ ಗೆಳೆತನ ಬೆಳೆಸಿದ ವ್ಯಕ್ತಿಯೊಬ್ಬ ಬೇನಾಮಿ ಹೆಸರಿನಲ್ಲಿ ಪರಿಚರ ಮಾಡಿಕೊಂಡು ಅಧಿಕ ಲಾಭ ನೀಡುವ ಭರವಸೆ ನೀಡಿ 84 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿ, ನಿರಂತರ ಅತ್ಯಾಚಾರ ನಡೆಸಿ, ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೂರಾಡಿ ಶಾಲೆಯ ಹತ್ತಿರ ನಿವಾಸಿ ನಾರಾಯಣ ಪೂಜಾರಿ ಇವರ ಮಗ ಸಂತೋಷ ಪೂಜಾರಿ (39) ಎಂಬಾತನೇ, ವಂಚಿಸಿ ಅತ್ಯಾಚಾರ ನಡೆಸಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪಿ. ಕೋಟದ ನಿವಾಸಿಯಾಗಿರುವ ವಿವಾಹಿತ ಮಹಿಳೆ, ಇಬ್ಬರು ಮಕ್ಕಳ ತಾಯಿ ನಿಶಾ (ಹೆಸರು ಬದಲಾಯಿಸಲಾಗಿದೆ) ವಂಚನೆಗೊಳಗಾದ ಸಂತ್ರಸ್ಥೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಡುಬಿದ್ರೆಯ ಸಂತೋಷ್ ಪೂಜಾರಿ ಸಂತ್ರಸ್ಥ ಮಹಿಳೆಯ ಪರಿಚಯಸ್ಥನಾಗಿದ್ದ. 2024 ನೇ ಜುಲೈ ತಿಂಗಳಲ್ಲಿ ಆತ ಅಪರಿಚಿತ ನಂಬರಿನಿಂದ ನಿಶಾಳಿಗೆ ವಾಟ್ಸಾಪ್ ಸಂದೇಶ ಕಳಿಸಿದ್ದಾನೆ. ಆದರೆ ಅದಕ್ಕೆ ನಿಶಾ ಪ್ರತಿಕ್ರಿಯಿಸದೇ ಇದ್ದಾಗ, ಕೂರಾಡಿ ಸಂತೋಷ ಪೂಜಾರಿ ಪಡುಬಿದ್ರೆ ಸಂತೋಷ ತನ್ನ ಸ್ನೇಹಿತ ಎಂದು ಹೇಳಿದ್ದಾನೆ. ಬಳಿಕ ಆರೋಪಿ ಸಂತೋಷ್ ಪೂಜಾರಿ ತನ್ನ ನಕಲಿ ಖಾತೆಯಲ್ಲಿ ಮಾತುಕತೆ ಮುಂದುವರೆಸಿದ್ದು, ಷೇರು ಮಾರ್ಕೆಟ್ ನಲ್ಲಿ ವ್ಯವಹರಿಸುವುದಾಗಿ ಸಂತ್ರಸ್ಥೆ ಅದರಲಿ ಹಣ ತೊಡಗಿಸಿದರೆ ಲಾಭ ಬರುವುದಾಗಿ ನಂಬಿಸಿದ್ದಾನೆ. ಲಾಭದ ಆಸೆಗೆ ನಿಶಾ 2024ರ ಸೆಪ್ಟಂಬರ್ ನಲ್ಲಿ ಎರಡು ಸಾವಿರ ಗೂಗಲ್ ಪೇ ಮಾಡಿದ್ದು, ಆಕೆಯ ನಂಬಿಕೆ ಗಳಿಸಲು ಆರೋಪಿ ಸಂತೋಷ್ ನಿಶಾಳಿಗೆ ಗೂಗಲ್ ಪೇ ಮೂಲಕ 1,91,700 ರೂಪಾಯಿ ಸಂದಾಯ ಮಾಡಿದ್ದಾನೆ. ಇದನ್ನು ನಂಬಿದ ನಿಶಾಳಿಂದ, ಬಳಿಕ ಆರೋಪಿಯ ಕೆನರಾ ಬ್ಯಾಂಕ್ ಆಕೌಂಟ್, ಬ್ಯಾಂಕ್ ಆಫ್ ಬರೋಡಾ ಅಕೌಂಟ್ ಗೆ ಹಲವಾರು ಬಾರಿ ಗೂಗಲ್ ಪೇ ಮೂಲಕ ಒಟ್ಟು 79ಲಕ್ಷದ 50 ಸಾವಿರ ರೂ ಹಾಗೂ ಬ್ಯಾಂಕ್ ಅಕೌಂಟ್ ಮುಖೇನ 5 ಲಕ್ಷದ ಮೂರೂವರೆ ಸಾವಿರ ರೂಪಾಯಿಗಳನ್ನು ಹಾಕಿಸಿಕೊಂಡಿದ್ದು, ಲಾಭಾಂಶದ ಹಣವನ್ನಾಗಲೀ, ಅಸಲು ಹಣವನ್ನಾಗಲೀ ಹಿಂತಿರುಗಿಸದೇ ವಂಚಿಸಿದ್ದಾನೆ.
ಅನುಮಾನಗೊಂಡ ನಿಶಾ ನೀಡಿದ ಹಣ ವಾಪಾಸು ಕೇಳಿದಾಗ ಹಣವನ್ನು ಮರಳಿಸುವುದಾಗಿ ಹೇಳಿ ಉಚ್ಚಿಲದ ಹೈವೇ ಬಳಿಯ ಹೋಟೆಲ್ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಲ್ಲದೇ, ವಿಡಿಯೋ ದಾಖಲಾತಿ ಮಾಡಿಕೊಂಡಿರುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ನಾಲ್ಕೈದು ಬಾರಿ ಬಲಾತ್ಕಾರ ಮಾಡಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ಹೇಳಿದರೆ ಆಕೆಯ ತಾಯಿ ಮತ್ತು ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥೆ ಮಹಿಳೆ ಉಡುಪಿ ಎಸ್ಪಿಯವರಿಗೆ ದೂರು ನೀಡಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿದ ದೂರನ್ನು ಆಧರಿಸಿ ಮಪ್ತಿಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರಿಗೇ ಆರೋಪು ಸಂತೋಷ್ ಪೂಜಾರಿ ಅವಾಚ್ಯವಾಗಿ ನಿಂದಿಸಿ, ಪೊಲೀಸರನ್ನೇ ಗೂಂಡಾಗಳೆಂದು ಜರಿದಿದ್ದು, ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಸಂದರ್ಭ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದು, ಇನ್ನೂ ಹಲವಾರು ವ್ಯಕ್ತಿಗಳಿಗೆ ಮೋಸ ಮಾಡಿರುವುದಾಗಿ ತಿಳಿದುಬಂದಿದೆ.
ಆರೋಪಿ ಸಂತೋಷ್ ಪೂಜಾರಿ ಜಾಮೀನಿಗಾಗಿ ಹೋರಾಟ ನಡೆಸುತ್ತಿದ್ದಾನೆಂದು ತಿಳಿದುಬಂದಿದ್ದು, ಕುಂದಾಪುರದ ಹಿರಿಯ ಕ್ರಿಮಿನಲ್ ಲಾಯರ್ ರವಿಕಿರಣ್ ಮುರ್ಡೇಶ್ವರ ಅವರು ಸಂತ್ರಸ್ಥ ಮಹಿಳೆಗೆ ನ್ಯಾಯ ಕೊಡಿಸವಲ್ಲಿ ಹೋರಾಡುತ್ತಿದ್ದಾರೆ. ಮಧ್ಯಮವರ್ಗದ ಮಹಿಳೆಯೊಬ್ಬರನ್ನು ನಂಬಿಸಿ, ಸಾಲ ಮಾಡಿಸಿ ಹಣ ದೋಚಿದ್ದಲ್ಲದೇ ಅತ್ಯಾಚಾರ ನಡೆಸಿದ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಇದಾಗಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.
