ಕುಂದಾಪುರ: ಮಾನವೀಯತೆ ಮೆರೆದ ಕರಾವಳಿ ಕಾವಲುಪಡೆ – ಅನಾಥ ಕುಟುಂಬಕ್ಕೆ ಆಸರೆಯಾಯ್ತು ಸೀವಾಕ್ ರೆಸ್ಟೋ ಕೆಫೆ
ಕುಂದಾಪುರ: ಕೋಡಿ ಸೀವಾಕ್ ನಲ್ಲಿ ಅನಾಥವಾಗಿ ದುಃಖಿಸುತ್ತಿದ್ದ ತಾಯು ಮಕ್ಕಳ ಕುಟುಂಬವೊದಕ್ಕೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸರು ಮಾನವೀಯತೆ ತೋರಿಸಿದ್ದು, ಸ್ಥಳೀಯ ಸೀವಾಕ್ ರೆಸ್ಟೀ ಕೆಫೆ ಆಸರ ನೀಡಿದ ಘಟನೆ ಪೆಬ್ರುವರಿ 12ರಂದು ಕುಂದಾಪುರದ ಕೋಡಿ ಸೀವಾಕ್ ನಲ್ಲಿ ನಡೆದಿದೆ.

ಫೆಬ್ರುವರಿ 12ರಂದು ಕುಂದಾಪುರ ತಾಲೂಕು ಕೋಡಿ ಗ್ರಾಮದ ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ ” ಬಳಿಯಲ್ಲಿ ಒಬ್ಬ ಮಹಿಳೆ ತನ್ನ ಮೂರು ಜನ ಚಿಕ್ಕ ಮಕ್ಕಳೊಂದಿಗೆ ದುಃಖಿತರಾಗಿ ನಿಂತಿದ್ದರು. ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿಎಸೈ ಮುಕ್ತ ಬಾಯಿ ಮತ್ತು ಕೋಡಿ ಬೀಟ್ ಸಿಬ್ಬಂದಿ ಗೋಪಾಲ ಖಾರ್ವಿಯವರು ಮಹಿಳೆಯನ್ನು ವಿಚಾರಿಸಿದ್ದಾರೆ. ಆಗ ಮಹಿಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗನಹಳ್ಳಿಯ ಸ್ಲಂ ನಿವಾಸಿ ಸಂಗೀತ (27) ಗಂಡ ಬದ್ರೇಶ್ ಎಂದು ಹಾಗೂ ಜೊತೆಯಲ್ಲಿ ಮಗ ಅಜಯ(9), ಮಗಳು ಖುಷಿ(8) ಮತ್ತು ಮಗಳು ರೋಜಾ(5) ಎಂಬುದಾಗಿ ತಿಳಿಸಿದ್ದು, ಜೀವನದಲ್ಲಿ ಯಾರು ದಿಕ್ಕು ದೆಸೆ ಇಲ್ಲದೆ ನಿರ್ಗತಿಕರಾಗಿ ಅಲೆಮಾರಿ ಜೀವನ ನಡೆಸುತ್ತಿದ್ದ ಈ ಮಹಿಳೆ ತನ್ನ ಮತ್ತು ಮಕ್ಕಳ ಜೀವನದ ಮುಂದಿನ ಭವಿಷ್ಯಕ್ಕಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸ ಕ್ಕಾಗಿ ತನಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

ಎಸೈ ಮುಕ್ತ ಬಾಯಿ ಮತ್ತು ಹೆಡ್ ಕಾನ್ಸ್ಟೇಬಲ್ ಗೋಪಾಲ ಖಾರ್ವಿ ಮಹಿಳೆ ಮತ್ತು ಮಕ್ಕಳ ಜೊತೆಗೆ ಸಮಾಲೋಚನೆ ನಡೆಸಿ, ಕೋಡಿಯ ಸಮಾಜ ಸೇವಕ ಅಶೋಕ್ ಪೂಜಾರಿಯವರ ಸಹಕಾರದೊಂದಿಗೆ ಮಕ್ಕಳನ್ನು ಉಡುಪಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನಕ್ಕೆ ದಾಖಲು ಮಾಡಿಸಿದ್ದಾರೆ. ಈ ಮಧ್ಯೆ ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ “ಯ ಮಾಲಕಿ ಜ್ಯೋತಿ ಮತ್ತು ಅವರ ಪತಿ ವಿಕಾಸ್ ಅನಾಥ ಮಹಿಳೆ ಸಂಗೀತಳಿಗೆ ಆಶ್ರಯ ಮತ್ತು ಕೆಲಸ ಕೊಡುವುದಾಗಿ ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡಿದ್ದು, ಮಾನವೀಯತೆ ಮೆರೆದಿದ್ದಾರೆ. ಇದೀಗ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿಎಸೈ ಮುಕ್ತ ಬಾಯಿ ಮತ್ತು ಕೋಡಿ ಬೀಟ್ ಸಿಬ್ಬಂದಿ ಗೋಪಾಲ ಖಾರ್ವಿಯವರ ಸಮಾಜಸೇವೆ ಮತ್ತು ಹಾಗೂ “ಸೀವಾಕ್ ರೆಸ್ಟೋ ಕೆಫೆ “ಯ ಮಾಲಕರ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
