ಹಿಂದಿ ಕಲಿಯದ ಸಂಸದ ಕೋಟ, ಸಂಸತ್ ನಲ್ಲಿ ಕನ್ನಡ ಬಾಯಿಪಾಠ! – ನಾಗೇಂದ್ರ ಪುತ್ರನ್ ವ್ಯಂಗ್ಯ

ಕೋಟ: ಆರು ತಿಂಗಳಲ್ಲಿ ಹಿಂದಿ ಕಲಿಯುತ್ತೇನೆ ಎಂದಿದ್ದ ಸಂಸದ ಕೋಟ ಮಾತು ತಪ್ಪಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ವ್ಯಂಗ್ಯವಾಡಿದ್ದಾರೆ.
ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ರೈತರ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಬೆಳೆ ವಿಮೆಯ ಬಗ್ಗೆ ಕನ್ನಡದಲ್ಲೇ ಧ್ವನಿ ಎತ್ತಿರುವುದು ಸ್ವಾಗತಾರ್ಹ. ಆದರೆ ಆರು ತಿಂಗಳಲ್ಲೇ ಹಿಂದಿ ಕಲಿಯುತ್ತೇನೆಂದು ಚುನಾವಣೆ ವೇಳೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಕೋಟ ಶ್ರೀನಿವಾಸ ಪೂಜಾರಿ ಅದೇ ಅನುಕಂಪದ ಮೇಲೆ ಸಂಸದರಾಗಿ ಅತ್ತ ಇಂಗ್ಲೀಷ್ ಕೂಡ ಬಾರದೆ, ಇತ್ತ ಹಿಂದಿಯೂ ಅರ್ಥವಾಗದೆ, ಹವಾಮಾನ ವರದಿ ಓದಿದಂತೆ ಓದಿ ಕುಳಿತುಕೊಳ್ಳುವ ಮೂಲಕ ಸಾರ್ವಜನಿಕ ವೇದಿಕೆಯಲ್ಲಿ ಆಡಿದ್ದ ತನ್ನ ವೈಯಕ್ತಿಕ ಮಾತನ್ನೇ ಉಳಿಸಿಕೊಳ್ಳಲಾಗದ ಸಂಸದ ಕೋಟಾ, ಕ್ಷೇತ್ರದ ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸುತ್ತಾರೆ? ಎಂದು ನಾಗೇಂದ್ರ ಪುತ್ರನ್ ಪ್ರಶ್ನಿಸಿದ್ದಾರೆ.
ಕಳೆದ ಲೋಕಸಭಾ ಚುವಾವಣೆ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು, “ಗೆದ್ದರೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸುವೆ, ಆರು ತಿಂಗಳ ಅವಧಿಯಲ್ಲಿ ಹಿಂದಿ ಕಲಿತು ರಾಜ್ಯದ ಪರ ಹಿಂದಿಯಲ್ಲಿಯೇ ಭಾಷಣ ಮಾಡುವೆ,” ಎಂದಿದ್ದರು. ಆದರೆ ಈಗ ಇಂಗ್ಲಿಷ್ ಮೊದಲೇ ಇಲ್ಲ, ಹಿಂದಿ ಗೊತ್ತೇ ಇಲ್ಲ. ಸಂಸದರಾಗಿ ಒಂದೂವರೆ ವರ್ಷದ ಬಳಿಕವೂ ಕನ್ನಡದಲ್ಲೇ ಒಂದಿಷ್ಟು ಬರೆದುದನ್ನು ಓದಿದರು. ರಾಜ್ಯವನ್ನು ಪ್ರತಿನಿಧಿಸುವ ಒಬ್ಬ ಜನಪ್ರತಿನಿಧಿಗೆ ಮಾತೃ ಭಾಷೆಯ ಜೊತೆಗೆ ರಾಷ್ಟ್ರೀಯ ಭಾಷೆಯ ಅಗತ್ಯ ಮತ್ತು ಮಹತ್ವವನ್ನು ಕೋಟ ಅರಿಯದೇ ಇರುವುದು ವಿಪರ್ಯಾಸ. ಅನುಕಂಪದ ಅಲೆಯಲ್ಲಿ ಗೆದ್ದವರೆಲ್ಲರೂ ಸಮರ್ಥರೆನ್ನಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಸಂಸದ ಶ್ರೀನಿವಾಸ ಪೂಜಾರಿ ಅವರು ಉತ್ತಮ ನಿದರ್ಶನ ಎಂದು ನಾಗೇಂದ್ರ ಪುತ್ರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
