ಹಟ್ಟಿಯಂಗಡಿ: ವೈಚಾರಿಕ ಶಿಕ್ಷಣದಿಂದ ಭವಿಷ್ಯ ಬಲಿಷ್ಟ – ಡಾ. ವೀಣಾ ಬನ್ನಂಜೆ
ಕುಂದಾಪುರ: ಮಕ್ಕಳಿಗೆ ಶಿಕ್ಷಣದ ಜೊತೆಗೆ ವೈಚಾರಿಕತೆಯ ಶಿಕ್ಷಣವನ್ನೂ, ದೈಹಿಕ ಹಾಗೂ ಮಾನಸಿಕ ಕ್ರೀಡೆಗಳನ್ನೂ ಪರಿಚಯಿಸುತ್ತಾ ಹೋದಾಗ ಮಕ್ಕಳ ಭವಿಷ್ಯ ಬಲಿಷ್ಟವಾಗುತ್ತದೆ ಎಂದು ಚಿಂತಕಿ ಡಾ. ವೀಣಾ ಬನ್ನಂಜೆ ಹೇಳಿದರು. ಅವರು ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ನಡೆದ ಸಿದ್ಧಿಸೌರಭ 2025 ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಷ್ಠಾನದ ಟ್ರಸ್ಟಿ ಎಸ್ ನಾರಾಯಣ ರಾವ್ ಮಾತನಾಡಿ, ವಿದ್ಯಾರ್ಥಿಗಳು ಸದಾ ಲವಲವಿಕೆಯಿಂದ ಕೂಡಿದ್ದು, ತಮ್ಮನ್ನು ತಾವು ಉದ್ಧರಿಸಿಕೊಳ್ಳುವ ಮಾರ್ಗದಲ್ಲಿ ಪ್ರಯತ್ನಪೂರ್ವಕವಾಗಿ ಸಾಗಬೇಕು. ವಿದ್ಯೆ ಎಂಬ ಸಂಪತ್ತನ್ನು ಹೊಂದಿದ ವ್ಯಕ್ತಿಗಳು ವಿನಯವಂತರಾಗಿ, ಪರೋಪಕಾರಿಗಳಾಗಿ ಸಮಾಜಹಿತಚಿಂತಕರಾಗಿ ಜೀವನ ನಡೆಸಬೇಕು. ಎಂದರು.
ಪ್ರತಿಷ್ಠಾನದ ಉಪಾಧ್ಯಕ್ಷ ಹೆಚ್ ಬಾಲಚಂದ್ರ ಭಟ್ ಮಾತನಾಡಿ, ಸಂಸ್ಕೃತಿಯನ್ನು ಅರಿತು ಸಂಸ್ಕಾರವನ್ನು ಹೊಂದಿ ಸಂಸಾರವೆಂಬ ಈ ಜಗತ್ತಿನಲ್ಲಿ ಬಾಳುವಂತೆ ಮಕ್ಕಳನ್ನು ಬೆಳೆಸುವ ಕೆಲಸವನ್ನು ಎಸ್ ಎಸ್ ಆರ್ ಎಸ್ ಮಾಡುತ್ತಾ ಬಂದಿದ್ದು, ಅದನ್ನು ಚನ್ನಾಗಿ ಮುಂದುವರಿಸುವ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ದತ್ತಿಬಹುಮಾನದೊಂದಿಗೆ ಸನ್ಮಾನಿಸಲಾಯಿತು. ನೂತನ ಸಾಹಿತಿಯಾಗಿ ಹೊರಹೊಮ್ಮಿದ ಕುಮಾರಿ ರಿಷಿಕಾ ದೇವಾಡಿಗರನ್ನು ಮತ್ತು ಶಾಲೆಯಿಂದ ರಾಜ್ಯ-ರಾಷ್ಟ್ರ-ಎಸ್ಜಿಎಫ಼್ಐ ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ತಿಮ್ಮಪ್ಪ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ವೀಣಾರಶ್ಮೀ ಎಂ, ವಿದ್ಯಾರ್ಥಿ ನಾಯಕ ಗಂಭೀರ್ ಜಿ ಗೌಡ, ವಿದ್ಯಾರ್ಥಿ ನಾಯಕಿ ಭವ್ಯಶ್ರೀ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್ ಪ್ರಾಥಮಿಕ ಶಾಲೆಯ ವಾರ್ಷಿಕ ವರದಿವಾಚಿಸಿದರು. ಉಪಪ್ರಾಂಶುಪಾಲ ರಾಮ ದೇವಾಡಿಗ ಸರ್ವ ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಅಶ್ವಿನೀ ಸ್ವಾಗತಿಸಿದರು. ಶಿಕ್ಷಕಿ ಶ್ರದ್ಧಾ ಜಿ ನಾಯಕ್ ಮತ್ತು ಸಚಿನ್ ಎಚ್ ಸಭಾ ನಿರೂಪಿಸಿದರು. ವಿದ್ಯಾರ್ಥಿ ನಾಯಕಿ ಭವ್ಯಶ್ರೀ ವಂದಿಸಿದರು. ಬಳಿಕ ವಿದ್ಯಾರ್ಥಿಗಳೇ ಸಂಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
