ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ವಿಧಿವಶ

ಮರಗಳೇ ನನ್ನ ಮಕ್ಕಳು, ಮರಗಳಿಮದಲೇ ಜಗತ್ತಿಗೆ ಉಸಿರು ಎನ್ನುವ ಅಚಲವಾದ ನಂಬಿಕೆಯೊಂದಿಗೆ ಸಾವಿರಾರು ಮರಗಳನ್ನು ನೆಟ್ಟು ‘ಸಾಲುಮರದ ತಿಮ್ಮಕ್ಕ’ ಎಂದೇ ಹೆಸರುವಾಸಿಯಾಗಿರುವ ಪದ್ಮಶ್ರೀ ಪುರಸ್ಕೃತ ಪರಿಸರಪ್ರೇಮಿ, ಶತಾಯುಷಿ ಸಾಲುಮರದ ತಿಮ್ಮಕ್ಕ ನಿಧನರಾಗಿದರು.

ಕೆಲವು ದಿನಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ವೃಕ್ಷಮಾತೆ ತಿಮ್ಮಕ್ಕ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಶುಕ್ರವಾರ ದೇಹ ತ್ಯಾಗ ಮಾಡಿದರು. ಮರಗಳನ್ನೇ ತಮ್ಮ ಮಕ್ಕಳೆಂದು ತಮ್ಮ ಪತಿಯೊಂದಿಗೆ ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವೆ 4.5 ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ ಅವರು ಎಂಟು ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದ್ದಾರೆ.
ಸಾಲುಮರದ ತಿಮ್ಮಕ್ಕ ಅಗಾಧ ಪರಿಸರ ಪ್ರೇಮ, ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸರ್ಕಾರ ಸಾಲುಮರದ ತಿಮ್ಮಕ್ಕ ಅವರಿಗೆ 2019ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದಲ್ಲದೇ ರಾಷ್ಟ್ರೀಯ ಪೌರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ಮತ್ತು ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿಗಳೂ ತಿಮ್ಮಕ್ಕನವರಿಗೆ ಲಭಿಸಿದೆ.
ಪರಿಸರ ರಕ್ಷಣೆಗೆ ತಿಮ್ಮಕ್ಕನವರ ಕೊಡುಗೆಯನ್ನು ಗಮನಿಸಿ ಅಮೆರಿಕಾದ ಪರಿಸರ ಶಿಕ್ಷಣ ಸಂಸ್ಥೆಯೊಂದಕ್ಕೆ ತಿಮ್ಮಕ್ಕ ಹೆಸರನ್ನು ಇಡಲಾಗಿದೆ. ಪ್ರಸ್ತುತ ತಿಮ್ಮಕ್ಕ ನೆಟ್ಟಿರುವ ಮರಗಳ ನಿರ್ವಹಣೆಯನ್ನು ಸರ್ಕಾರ ವಹಿಸಿಕೊಂಡಿದೆ.
