ಕುಂದಾಪುರ: ನ. 15-19 ವರೆಗೆ ‘ಖಾಕಿಗೊಂದು ಕಾರ್ಟೂನ್ ಸೆಲ್ಯೂಟ್’ ಹಬ್ಬ – ಬಿ. ದಯಾನಂದ ಐಪಿಎಸ್ ರಿಂದ ಉದ್ಘಾಟನೆ
ಕುಂದಾಪುರ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಭಾಗಿತ್ವದೊಂದಿಗೆ ನವೆಂಬರ್ 15ರಿಂದ 19ರವರೆಗೆ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ‘ಖಾಕಿಗೊಂದು ಕಾರ್ಟೂನ್ ಸೆಲ್ಯೂಟ್’ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ, ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಹೇಳಿದ್ದಾರೆ.

ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಕಾರಾಗೃಹ ಮತ್ತು ಸುಧಾರಣೆ ವಿಭಾಗದ ಪೊಲೀಸ್ ಮಹಾನಿರ್ದೇಶಕ ಬಿ. ದಯಾನಂದ್ ಐಪಿಎಸ್ ರವರು ಉದ್ಘಾಟಿಸಲಿದ್ದಾರೆ. ಉಡುಪಿ ಎಸ್ಪಿ ಹರಿರಾಂ ಶಂಕರ್ ಇರಲಿದ್ದಾರೆ ಎಂದರು.
ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಆಯ್ದ 10 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳಿಗೆ ಸನ್ಮಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಮಧ್ಯಾಹ್ನ ಪೋಷಕರ ಮಕ್ಕಳಿಗಾಗಿ ಕಾರ್ಟೂನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಪೋಷಕರಿಗಾಗಿ ಮಧ್ಯಾಹ್ನ 2 ಗಂಟೆಗೆ “ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ” ಎಂಬ ಶೀರ್ಷಿಕೆಯಡಿ ಖ್ಯಾತ ಮನೋ ವೈದ್ಯ ಡಾ. ವಿರೂಪಾಕ್ಷ ದೇವರಮನೆ ಮತ್ತು ಕುಂದಾಪುರದ ಎಸೈ ನಂಜಾ ನಾಯ್ಕ್ ಎನ್ ಅವರಿಂದ ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದೆ.

ಭಾನುವಾರ ಬೆಳಿಗ್ಗೆ ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರಿಂದ ವಿಶೇಷ ಕಾರ್ಟೂನ್ ವರ್ಕ್ಶಾಪ್ ನಡೆಯಲಿದೆ ಹಾಗೂ ದಿನಾಂಕ 17, 18 ಹಾಗೂ 19 ನವೆಂಬರ್ 2025 ರಂದು ಮೂರು ದಿನಗಳ ಕಾಲ ಕಾರ್ಟೂನ್ ಪ್ರದರ್ಶನ ಮತ್ತು ಲೈವ್ ಕ್ಯಾರಿಕೇಚರಿಂಗ್ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
