ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ 24×7 ತುರ್ತು ವೈದ್ಯಕೀಯ ಸೇವೆ ವಿಸ್ತರಣೆ- ಅಕ್ಟೋಬರ್ 26ರಂದು ಲೋಕಾರ್ಪಣೆ
ಕುಂದಾಪುರ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಬಲಗೊಳಿಸಲು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ವಿಸ್ತರಿಸಿದ್ದು, ಅಕ್ಟೋಬರ್ 26ರಂದು ಉದ್ಘಾಟನೆಗೊಳ್ಳಲಿದೆ ಎಂದು ಶ್ರೀ ಸಾಯಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಂಜನ್ ಶೆಟ್ಟಿ ಹೇಳಿದರು.

ಅವರು ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಶ್ರೀ ಸಾಯಿ ಆಸ್ಪತ್ರೆಯು ಈಗಾಗಲೇ ತುರ್ತು ಮತ್ತು ಕ್ರಿಟಿಕಲ್ ಕೇರ್ ಸೇವೆ, ಐಸಿಯು (ಇಂಟೆನ್ಸಿವ್ ಕೇರ್ ಯುನಿಟ್), ಆಪರೇಶನ್ ಥಿಯೇಟರ್, ಎಕ್ಸ್ ರೇ, ಡಯಾನ್ನೊಸ್ಟಿಕ್ ಲ್ಯಾಬೊರಟರಿ, ಫಿಸಿಯೊಥೆರಪಿ ವಿಭಾಗ, ಸ್ಕ್ಯಾನಿಂಗ್ ಮತ್ತು ಇಮೇಜಿಂಗ್ ಸೇವೆ, ವಿಶೇಷ ವಾರ್ಡ್ ಮತ್ತು ಡಿಲಕ್ಸ್ ರೂಮ್, ಮಹಿಳೆ ಮತ್ತು ಪುರುಷರ ಜನರಲ್ ವಾರ್ಡ್. ಡೇ ಕೇರ್ ಯುನಿಟ್ ಸೇರಿ ಹಲವು ಸೌಲಭ್ಯಗಳನ್ನು ಹೊಂದಿದೆ. ಕೆ.ಎಂ.ಸಿ ಆಸ್ಪತ್ರೆಯ ತುರ್ತು ವಿಭಾಗದ ತಜ್ಞರ ಸೇವೆಯನ್ನು ಕುಂದಾಪುರದ ಜನತೆ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲಿದ್ದಾರೆ. ಈ ನಡೆಯು ವೈದ್ಯಕೀಯ ಸೇವೆಯನ್ನು ಮತ್ತಷ್ಟು ವಿಸ್ತರಿಸಿ, ಗೋಲ್ಡನ್ ಅವರ್ (ತುರ್ತು ಸಮಯ) ನಲ್ಲಿ ರೋಗಿಯನ್ನು ರಕ್ಷಿಸುವಲ್ಲಿ ಹಾಗೂ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ನೆರವಾಗಲಿದೆ ಎಂದರು.
ಕೆ.ಎಂ.ಸಿ ಮಂಗಳೂರು ಇವರ ಅನುಭವ ಮತ್ತು ಪರಿಣತಿ ಕುಂದಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ಸಾಕಷ್ಟು ಅನುಕೂಲಕರವಾಗಲಿದೆ. ಈ ಪಾಲುದಾರಿಕೆಯು ಶುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳ ಆರೈಕೆಯ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ, ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸಲು ನಮ್ಮ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.

ಈ ಕುರಿತು ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀದು ರಾಧಾಕೃಷ್ಣನ್, ಹೃದಯಾಘಾತ, ಸ್ಟ್ರೋಕ್, ಟ್ರಾಮಾ, ಪಾಲಿ ಟ್ರಾಮಾ, ಹಾವು ಕಡಿತ, ವಿಷ ಸೇವನೆ, ಮಕ್ಕಳ ತುರ್ತು ಚಿಕಿತ್ಸೆ ಸೇರಿದಂತೆ ಹಲವು ತುರ್ತು ವೈದ್ಯಕೀಯ ಪ್ರಕರಣಗಳನ್ನು ಸ್ಥಿರಗೊಳಿಸಲಾಗುತ್ತದೆ ಎಂದರು. ಮಲ್ಟಿ ಸೈಷಾಲಿಟಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಕಾರ್ಡಿಯಾಕ್, ನ್ಯೂರೊ ಮಕ್ಕಳ ಅಥವಾ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಯನ್ನು ಮುಂದಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ವೈದ್ಯಕೀಯ ಆರೈಕೆಗೆ ವರ್ಗಾಯಿಸಲಾಗುವುದು. ಅಲ್ಲಿ ಉತ್ತಮವಾದ ಬಹು ವಿಭಾಗದ ಆರೈಕೆಯನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭ ಕೆಎಂಸಿ ಮಂಗಳೂರು ಆಸ್ಪತ್ರೆಯ ಸೀನಿಯರ್ ಮ್ಯಾನೇಜರ್ ಮಾರ್ಕೆಟಿಂಗ್ ವಿಭಾಗದ ರಾಕೇಶ್ ಮಾತನಾಡಿ, ಈ ಪಾಲುದಾರಿಕೆಯು ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮತ್ತು ಭಟ್ಕಳ, ಹೊನ್ನಾವರ, ಕುಮಟಾ ಭಾಗದಲ್ಲಿ ಆರೋಗ್ಯ ಸೇವೆಯ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಗುಣಮಟ್ಟದ ಆರೋಗ್ಯ ಸೇವೆ ನೀಡುವ ಕೆಎಂಸಿ ಆಸ್ಪತ್ರೆಯ ಭದ್ರತೆಗೆ ಇದೊಂದು ಮೈಲಿಗಲ್ಲು. ಶ್ರೀ ಸಾಯಿ ಆಸ್ಪತ್ರೆಗೆ ನಮ್ಮ ತಜ್ಞರ ತಂಡ ಮತ್ತು ಮೂಲಸೌಕರ್ಯವನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ತ್ವರಿತ ಸೇವೆ ಮತ್ತು ತುರ್ತು ವೈದ್ಯಕೀಯ ಸೇವೆಯ ಉತ್ತಮ ಸೌಲಭ್ಯವನ್ನು ಕಲ್ಪಿಸಿದ್ದೇವೆ’ ಎಂದರು.
