ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟ ಸಂತೋಷ್ ಕುಮಾರ್ – ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ

ಕೋಟ: ತನ್ನ ವಯಕ್ತಿಕ ಜೀವನಕ್ಕಾಗಿ ಏನನ್ನೂ ಬಯಸದೆ ಸಮಾಜಕ್ಕಾಗಿಯೇ ಜೀವನವನ್ನು ಸಮರ್ಪಿಸಿಕೊಂಡ ಜೀವನದ ಯಶೋಗಾಧೆ ಅತ್ಯಮೂಲ್ಯವಾದದ್ದು. ಪ್ರತಿಯೊಬ್ಬರ ಜೀವವೂ ಅಮೂಲ್ಯವಾದದ್ದು. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀವು ನಿಮ್ಮ ಜೀವದ ಬಗ್ಗೆ ಚಿಂತಿಸದಿದ್ದಾಗ ಮನೆಯವರ ಪಾಡು ಶೋಚನೀಯ ವ್ಯವಸ್ಥೆಗೆ ತಲುಪುತ್ತದೆ. ಈ ದಿಸೆಯಲ್ಲಿ ಅವರ ಕುಟುಂಬಕ್ಕೆ ನೆರವಾಗುವ ಇಂತಹ ಕಾರ್ಯಗಳು ಶ್ಲಾಘನೀಯ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಾಂಸ್ಕೃತಿಕ ಚಿಂತಕ, ಶಿಕ್ಷಕ ಸಂತೋಷ್ ಕುಮಾರ್ ಕೋಟ ಸಹಾಯರ್ಥವಾಗಿ ಸೋಮವಾರ ಕೋಟದ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರ ಕುಟುಂಬಕ್ಕೆ ನೆರವಾಗುವ ನಿಧಿ ಹಸ್ತಾಂತರಿಸಿ ಮಾತನಾಡಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ, ಸಂತೋಷ್ ಕುಮಾರ್ ವ್ಯಕ್ತಿತ್ವ ಹಾಗೂ ಅವರಿಗೆ ಸಮಾಜದ ಬಗ್ಗೆ ಇದ್ದ ಕಾಳಜಿ, ಶಿಕ್ಷಣದ ಬಗ್ಗೆ ಇದ್ದ ಅವರ ಪ್ರೇಮವನ್ನು ಸಭೆಯಲ್ಲಿ ನುಡಿತೋರಣದ ಮೂಲಕ ಬಿಚ್ಚಿಟ್ಟರು.
ಇದೇ ವೇಳೆ ಸಂತೋಷ್ ಕುಮಾರ್ ಕುಟುಂಬಕ್ಕೆ ಐದೂವರೆ ಲಕ್ಷ ರೂಪಾಯಿಗಳ ನಿಧಿಯನ್ನು ಅವರ ಸಂಬಂಧಿಕರಾದ ಮಹೇಶ್ ರವರಿಗೆ ಹಸ್ತಾಂತರಿಸಲಾಯಿತು.
ಉದ್ಯಮಿ ಬಿಜು ನಾಯರ್, ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ನಿರ್ದೇಶಕ ಜಿ.ತಿಮ್ಮ ಪೂಜಾರಿ, ಸಿಇಒ ಶರತ್ ಕುಮಾರ್ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಯಕ್ಷ ಚಿಂತಕ ಪ್ರೋ.ಎಸ್ ವಿ ಉದಯ್ ಕುಮಾರ್ ಶೆಟ್ಟಿ, ಬೇಳೂರು ರಾಘವ ಶೆಟ್ಟಿ, ದಸಂಸ ಮುಖಂಡ ಶ್ಯಾಮಸುಂದರ್ ತೆಕ್ಕಟ್ಟೆ, ರಾಜು ಬೆಟ್ಟಿನ ಮನೆ, ಕಾರ್ಯಕ್ರಮ ಸಂಘಟಕರಾದ ಜಯರಾಮ ಶೆಟ್ಟಿ, ಪ್ರಭಾಕರ್ ಪಡುಕರೆ, ನಾಗರಾಜ್ ಪಡುಕರೆ, ಮಂಜುನಾಥ್ ಭಂಡಾರಿ, ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ ಮತ್ತಿತರರು ಇದ್ದರು. ಸಂಘಟಕ ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ನಿರ್ವಹಿಸಿದರು. ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸುಧನ್ವಮೋಕ್ಷ ಯಕ್ಷಗಾನ ಪ್ರದರ್ಶಗೊಂಡಿತು.
