ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ ಕಳವು: ಆರೋಪಿ ಬಂಧನ
ಕುಂದಾಪುರ: ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಕೋಟ ಪೊಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬ್ರಹ್ಮಾವರ ತಾಲೂಕಿನ ಶಿರಿಯಾರ ಅಂಗನವಾಡಿ ಬಳಿಯ ಗುಡ್ಡಟ್ಟು ಗಣಪತಿ ದೇವಸ್ಥಾನ ರಸ್ತೆಯ ನಿವಾಸಿ ಸುಬ್ರಹ್ಮಣ್ಯ ಭೋವಿ ಎಂಬಾತನ ಮಗ ಆನಂದ (26) ಬಂಧಿತ ಆರೋಪಿ.


ಆರೋಪಿ ಆನಂದ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡೆಅಂಗಡಿ ಎಂಬಲ್ಲಿರುವ ಬಸವ ಪೂಜಾರಿ ಎಂಬುವರ ಮನೆಗೆ ನುಗ್ಗಿ ಸುಮಾರು 18 ಗ್ರಾಂ ತೂಕದ ಅಂದಾಜು ಒಂದು ಲಕ್ಷ ನಲವತ್ತೈದು ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಿದ್ದ. ಬಸವ ಪೂಜಾರಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ ಕುಮಾರ್ ಆರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಆನಂದನನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
