ಪಾಂಡೇಶ್ವರ: ಗ್ರಾಮದ ಒಗ್ಗಟ್ಟಿಗೆ ಶಾರದೋತ್ಸವ ವೇದಿಕೆ ಕಲ್ಪಿಸಿದೆ – 32ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆನಂದ್ ಸಿ ಕುಂದರ್

ಕೋಟ: ದುಷ್ಟ ಶಕ್ತಿ ಸಂವಾರಕ್ಕಾಗಿ ನವದರ್ಗೆಯರು ಅವತರಿಸಿ ,ಧರ್ಮ ರಕ್ಷಣೆಯ ಪ್ರತೀತಿ ಪಡೆದುಕೊಂಡಿದೆ ಅದರ ಮೂಲಕ ಮಹತ್ವ ಪಡೆದ ಶರನ್ನವರಾತ್ರಿ ಉತ್ಸವ ಇಂದು ವ್ಯಾಪಕವಾಗಿ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಗ್ರಾಮ ಗ್ರಾಮಗಳಲ್ಲಿ ಶಾರದೋತ್ಸವ ರೂಪದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು. ಅವರು ಬುಧವಾರ ಪಾಂಡೇಶ್ವರ ಶಾಲಾ ವಠಾರದಲ್ಲಿ 32ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಶಾರದೋತ್ಸವ 2025ರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಶಾರದೋತ್ಸವ ಸಮಿತಿಯ ಹಿರಿಯ ಸದಸ್ಯ ಪಿ.ವಿ ಸೀತಾರಾಮ ಆಚಾರ್ ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಕೃಷಿ ಕುಟುಂಬದ ಅನ್ವಿತಾ ಪಾಂಡೇಶ್ವರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೇ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು,ಶಾರದೋತ್ಸವ ಕ್ರೀಡಾ ವಿಜೇತರಿಗೆ ಬಹುಮಾನವನ್ನು ವೇದಿಕೆಯಲ್ಲಿ ವಿತರಿಸಲಾಯಿತು. ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್, ಫಾರ್ಚುನ್ ಲೈಫ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಮಾಲೀಕರಾದ ಜೋಸೆಫ್ ಎಲಿಯಾಸ್ ಮೇನೆಜಸ್, ಸಾಸ್ತಾನ ಸಂತ ಅಂತೋನಿ ಇಗರ್ಜಿಯ ಧರ್ಮ ಗುರುಗಳಾದ ಫಾದರ್ ಸುನಿಲ್ ಡಿಸಿಲ್ವಾ ಉಪಸ್ಥಿತರಿದ್ದರು.
ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಪ್ರಸ್ತಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ದಿನಕರ್ ವರದಿ ಮಂಡಿಸಿದರು. ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು. ಬಳಿಕ ಅಪರಾಹ್ನ ಮಹಾಪೂಜೆ ಬಾಲಾಜಿ ಭಜನಾ ಮಂಡಳಿ ಮೂಡಹಡು ಇವರಿಂದ ಭಜನಾ ಕಾರ್ಯಕ್ರಮ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ಸಂಜೆ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಗಾನ ನೀನಾದ ಆರ್ಕೆಸ್ಟ್ರಾ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ಗುರುವಾರ ಸಂಜೆ ಚಂಡಿಕಾ ಯಾಗ ಮಹಾಪೂಜೆ ಪ್ರಸಾದ ವಿತರಣೆ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಅಪರಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಪುರ ಮೆರವಣಿಗೆಯೊಂದಿಗೆ ಶಾರದ ಮಾತೆಯ ಶೋಭಾ ಯಾತ್ರೆ ವಿಸರ್ಜನಾ ಕಾರ್ಯಕ್ರಮ ಜರುಗಿತು.