ಆಜ್ರಿ: ಅಪಾಯಕಾರಿ ಬಸ್ ನಿಲ್ದಾಣಕ್ಕೆ ಕೊನೆಗೂ ಮುಕ್ತಿ –
ಇದು ವಾಸ್ತವ.ಕಾಂ ವರದಿಯ ಫಲಶ್ರುತಿ
ಕುಂದಾಪುರ: ಸುಮಾರು ಮೂವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡು ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಾಲಿಗೆ ಅಪಾಯ ಆಹ್ವಾನಿಸುತ್ತಿದ್ದ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರೆಬೇರುಕಟ್ಟೆ ಬಸ್ ನಿಲ್ದಾಣಕ್ಕೆ ಕೊನೆಗೂ ಆಜ್ರಿ ಗ್ರಾಮ ಪಂಚಾಯತ್ ಹೊಸ ಛಾವಣಿ ಮಾಡುವ ಮೂಲಕ ಮುಕ್ತಿ ನೀಡಿದೆ. ಆ ಮೂಲಕ ವಾಸ್ತವ.ಕಾಮ್ ವರದಿಗೆ ಗ್ರಾಮ ಪಂಚಾಯತ್ ಸ್ಪಂದಿಸಿದೆ.

ಮೋರ್ಟು, ರಾಮನಕೊಡ್ಲು, ಅರ್ಗೋಡು, ಬೆಳುವನ, ಕುದ್ರೆಬೇರುಕಟ್ಟೆ, ದ್ಯಾಗೇರಿ, ಮೆಟ್ಸಂಕ, ಮೇಲ್ಬೆಳುವನ ಸುತ್ತಮುತ್ತಲಿನ ಶಾಲೆ ಮಕ್ಕಳೇ ಹೆಚ್ಚಾಗಿ ಈ ಬಸ್ ನಿಲ್ದಾಣವನ್ನು ಬೆಳಿಗ್ಗೆ ಮತ್ತು ಸಂಜೆ ಆಶ್ರಯಿಸುತ್ತಿದ್ದಾರೆ.


ಆದರೆ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡ ಪರಿಣಾಮ ನಿಲ್ದಾಣದ ಒಳಗೆ ನಿಂತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮಳೆಗಾಲದಲ್ಲಂತೂ ನೀರೆಲ್ಲಾ ಒಳಗೆ ಮಳೆಯೆಲ್ಲಾ ಹೊರಗೆ ಎನ್ನುವಂತಾಗಿತ್ತು. ಒಳಗೆ ನಿಂತುಕೊಂಡರೆ ಎಲ್ಲಿ ತಲೆ ಮೇಲೆ ಹಂಚುಗಳು ಕುಸಿದು ಬೀಳುತ್ತವೋ ಎನ್ನುವ ಭಯ ಕಾಡುತ್ತಿತ್ತು.

ಈ ಬಗ್ಗೆ ವಾಸ್ತವ.ಕಾಮ್ “ಮಳೆಯೆಲ್ಲಾ ಹೊರಗೆ ನೀರೆಲ್ಲಾ ಒಳಗೆ!:” ಎನ್ನುವ ತಲೆಬರಹದೊಂದಿಗೆ ಸಚಿತ್ರ ವರದಿ ಪ್ರಕಟಿಸಿತ್ತು. ಇದೀಗ ಶನಿವಾರ ಆಜ್ರಿ ಗ್ರಾಮ ಸಭೆ ನಡೆಯಲಿದ್ದು, ಗ್ರಾಮಸ್ಥರ ಆಕ್ರೋಶ ಕಟ್ಟೆಯೊಡೆಯುವ ಮುನ್ನವೇ ಗುರುವಾರ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತ್ ಜೆ.ಐ. ಶೀಟುಗಳನ್ನು ಹಾಸಿ ಛಾವಣಿ ನಿರ್ಮಿಸಿದೆ.
ವರದಿ: ಜಯಶೇಖರ್ ಮಡಪ್ಪಾಡಿ, ಕುಂದಾಪುರ
