ಕೋಟ: ಪಂಚವರ್ಣದ 270ನೇ ಪರಿಸರಸ್ನೇಹಿ ಅಭಿಯಾನ, ಹಸಿರು ಜೀವ ಸಮಾರೋಪ
ಕುಂದಾಪುರ: ಸದಾ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವ ಪಂಚವರ್ಣದ ಕಾರ್ಯ ವೈಖರಿ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ಸಂಘಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯಕ್ರಮಗಳನ್ನು ನೀಡುತ್ತವೆ ಆದರೆ ಪಂಚವರ್ಣ ಸಂಘಟನೆ ಒಂದು ಹೆಜ್ಜೆ ಮುಂದೆ ಇರಿಸಿ ನಿರಂತರ ಆರು ವರ್ಷಗಳಿಗೂ ಅಧಿಕವಾಗಿ ಪ್ರಕೃತಿಯನ್ನು ಆರಾಧಿಸುವ ಉಳಿಸುವ ಕಾಯಕ ನಿಜಕ್ಕೂ ಶ್ಲಾಘನೀಯ ಇಂತಹ ಸಂಘಟನೆ ಗ್ರಾಮ ಗ್ರಾಮದಲ್ಲಿ ಹುಟ್ಟಿಕೊಳ್ಳಲಿ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಹೇಳಿದರು. ಅವರು ತೆಕ್ಕಟ್ಟೆ ಗಣಪತಿ ಶ್ರೀಯಾನ್ ಮನೆಯಂಗಳದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ 270ನೇ ಭಾನುವಾರದ ಪರಿಸರಸ್ನೇಹಿ ಹಸಿರುಜೀವ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ಸಹಾಯಕ ಆಯುಕ್ತೆ ರಶ್ಮಿ ಗಿಡವನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಬೆಳಿಗ್ಗೆ 7 ಗಂಟೆಯಿಂದ ಹಲವು ಮನೆಗಳಿಗೆ ತೆರಳಿ ಗಿಡ ನೆಟ್ಟು ಅದರ ಮಹತ್ವ ತಿಳಿಸಲಾಯಿತು. ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ. ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಮಾಜಿ ಜಿ.ಪಂ ಸದಸ್ಯ ಟಿ.ಗಣಪತಿ ಶ್ರೀಯಾನ್, ತೆಕ್ಕಟ್ಟೆ ಗ್ರಾ.ಪಂ ಎಸ್ಎಲ್ಆರ್ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಇಂಡಿಕಾ ಕಲಾ ಬಳಗದ ಪ್ರಭಾಕರ್ ಪಡುಕರೆ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.
