ಗ್ರಾಮ ಪಂಚಾಯತುಗಳು ತ್ಯಾಜ್ಯ, ವ್ಯಾಜ್ಯ ಮತ್ತು ವ್ಯಸನಮುಕ್ತವಾದಾಗ ಅಭಿವೃದ್ಧಿ ಸಾಧ್ಯ – ಸಂಸದ ಕೋಟ
ಉಡುಪಿ ಜಿಲ್ಲೆಯ ಮೊದಲ ಜಲ್ ಜೀವನ್ ಗ್ರಾಮವಾಗಿ 4ನೇ ಕೋಡಿ ಗ್ರಾ. ಪಂ. ಘೋಷಣೆ

ಕುಂದಾಪುರ: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತುಗಳು ತ್ಯಾಜ್ಯ ಮುಕ್ತ, ವ್ಯಾಜ್ಯ ಮುಕ್ತ ಹಾಗೂ ವ್ಯಸನಮುಕ್ತವಾದಾಗ ಅಭಿವೃದ್ಧಿ ಸಾಧ್ಯ. ಕೋಡಿ ಗ್ರಾಮ ಪಂಚಾಯತ್ನಲ್ಲಿ ಕ್ರೀಯಾಶೀಲ ಅಭಿವೃದ್ಧಿ ಅಧಿಕಾರಿಯಾಗಿ ರವೀಂದ್ರ ರಾವ್ ಕಾರ್ಯನಿರ್ವಹಿಸುತ್ತಿದ್ದು, ಈ ಅನುಷ್ಠಾನಕ್ಕೆ ರೂವಾರಿಯಾಗಿಸಲು ಸಾಧ್ಯವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.







ಅವರು ನಾಲ್ಕನೇ ಕೋಡಿ ಗ್ರಾಮಪಂಚಾಯತ್ನಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಉಡುಪಿ ಕೋಡಿ ಗ್ರಾಮ ಪಂಚಾಯತ್, ಬ್ರಹ್ಮಾವರ ತಾಲೂಕು ಪಂಚಾಯತ್ ಇವರ ಆಶ್ರಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಜಲಜೀವನ ಮಿಷನ್ ಯೋಜನೆಯಡಿ ಕೋಡಿ ಗ್ರಾಮದಲ್ಲಿ 24 / 7 ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮಕ್ಕೆ ರತ್ನಾಕರ ಎಂಬುವರ ಮನೆಯಲ್ಲಿ ಚಾಲನೆ ನೀಡಿ ಮಾತನಾಡಿದರು.








ಹಸಿರು ಜೀವ ಯೋಜನೆಯ ಸಮಾರೋಪದ ಹಿನ್ನೆಲೆಯಲ್ಲಿ ಗಿಡ ನೆಟ್ಟು ಮಾತನಾಡಿದ ಶಾಸಕ ಕಿರಣ್ ಕೊಡ್ಗಿ, ಕೋಡಿ ಗ್ರಾಮಪಂಚಾಯತ್ ವಿವಿಧ ಯೋಜನೆಗಳ ಅನುಷ್ಠಾನಗಳ ಮೂಲಕ ದಿಟ್ಟ ಹೆಜ್ಜೆ ಇರಿಸಿದೆ. ದಿನದ 24ಗಂಟೆ ನೀರುಣಿಸುವ ಯೋಜನೆಯನ್ನು ಅನುಷ್ಠಾನ ಅಸಾಮಾನ್ಯ ಕಾರ್ಯವನ್ನು ಸಾಧಿಸಿದ್ದಾರೆ. ಅದರಲ್ಲೂ ಪಂಚವರ್ಣ ಸಂಘಟನೆ, ಗೀತಾನಂದ ಫೌಂಡೇಶನ್ ಸಹಕಾರ ಪಡೆದು ಇಡೀ ಗ್ರಾಮ ಹಸಿರೀಕರಣಗೊಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.








ರಾಜ್ಯ ಸರ್ಕಾರದ ನಲ್ಜಲ್ ಮಿತ್ರ ಸಿಂಪ್ಯೋಟರ್ ಹಸ್ತಾಂತರಿಸಲಾಯಿತು. ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ನೀಡಿದವರನ್ನು ಗುರುತಿಸಿ ಗೌರವಿಸಲಾಯಿತು. ಪಂಚಾಯತ್ ವಾಟರ್ಮೆನ್ ರವಿಚಂದ್ರ, ಕರುಣಾಕರ ಮತ್ತು ಹಸಿರುಜೀವ ಕಾರ್ಯಕ್ರಮದ ಅನುಷ್ಠಾನಕ್ಕೆ ಸಹಕರಿಸಿದ ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಪಂಚವರ್ಣದ ಪರವಾಗಿ ರವೀಂದ್ರ ಕೋಟ ಇವರನ್ನು ಸನ್ಮಾನಿಸಲಾಯಿತು. ಪಂಚಾಯತ್ ಅಭಿವೃದ್ಧಿಗೆ ಸಹಕರಿಸುತ್ತಿರುವ ಅಂಗನವಾಡಿ ಹಾಗೂ ಪಂಚಾಯತ್ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಕುಡಿಯುವ ನೀರಿನ ಅವಕಾಶ ಕಲ್ಪಿಸಿದ ಪಂಚಾಯತ್ಗೆ ಕೃತಜ್ಞತೆ ಸಲ್ಲಿಸಲಾಯಿತು.






ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಮಾತನಾಡಿ, ಕೋಡಿ ಮತ್ತು ಕೋಡಿ ಬೇಂಗ್ರೆಯಲ್ಲಿ ಉಪ್ಪು ನೀರಿನಿಂದಾಗಿ ಕುಡಿಯುವ ನೀರಿಗೆ ಮಹತ್ವ ಇದೆ. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಪಂಚಾಯತ್ ಕ್ರಮ ಶ್ಲಾಘನೀಯ ಎಂದರು. ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳಿ, ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯವಾಹಕ ಅಭ್ಯಂತರ ವೆಂಕಟೇಶಮೂರ್ತಿ, ಬ್ರಹ್ಮಾವರ ತಾಲುಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹೀಂಪುರ್, ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ತಿಂಗಳಾಯ, ನೆಹರು ಕೇಂದ್ರದ ಅಧಿಕಾರಿ ಉಲ್ಲಾಸ್, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಪಂಚಾಯತ್ ಪ್ರತಿನಿಧಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಪ್ರಭಾಕರ ಮೆಂಡನ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರೂಪಿಸಿ ಪ್ರಾಸ್ತಾವಿಸಿದರು. ಗ್ರಾ. ಪಂ. ಸದಸ್ಯ ಕೃಷ್ಣ ಪೂಜಾರಿ ವಂದಿಸಿದರು.
