ಕೋಟ-ಕೋಡಿತಲೆಯ ಹೊಸಬೇಂಗ್ರೆಯಲ್ಲಿ ದೋಣಿ ದುರಂತ : ಒಬ್ಬ ಮೀನುಗಾರ ಸಾವು, ಇಬ್ಬರು ಪಾರು!
ಕುಂದಾಪುರ: ಮೀನುಗಾರಿಕೆಗೆಂದು ಸಮುದ್ರಕ್ಕೆ ಹೋಗಿದ್ದ ಸಮಯ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದ ಪರಿಣಾಮ ಒಬ್ಬ ಮೀನುಗಾರ ಸಾವನ್ನಪ್ಪಿದ್ದು, ದೋಣಿಯಲ್ಲಿದ್ದ ಇತರ ಇಬ್ಬರು ಮೀನುಗಾರರು ಪಾರಾದ ಘಟನೆ ಕೋಟ ಸಾಸ್ತಾನದ ಸಾಸ್ತಾನದ ಕೋಡಿತಲೆ ಅಳಿವೆ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಶರತ್ ಖಾರ್ವಿ (27) ಎಂಬಾತನೇ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಮೀನುಗಾರ ಕಾರ್ಮಿಕ ಎಂದು ಗುರುತಿಸಲಾಗಿದೆ. ಅಕ್ಷಯ ಖಾರ್ವಿ, ಮಂಜುನಾಥ್ ಖಾರ್ವಿ ಎಂಬುವರು ಪಾರಾದ ಅದೃಷ್ಠಶಾಲಿಗಳು.

ಶಂಕರ್ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಶುಕ್ರವಾರ ಬೆಳಿಗ್ಗೆ ಅಕ್ಷಯ ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ಶರತ್ ಖಾರ್ವಿ ಎಂಬುವರು ಮೀನುಗಾರಿಕೆ ತೆರಳಿದ್ದರು. ಆದರೆ ಮೀನುಗಾರಿಕೆ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೂವರು ನೀರುಪಾಲಗಿದ್ದರು.
ಅಕ್ಷಯ ಖಾರ್ವಿ ಹಾಗೂ ಮಂಜುನಾಥ್ ಖಾರ್ವಿಯವರು ಈಜಿ ದಡ ಸೇರಿದ್ದಾರೆ. ಆದರೆ ಶರತ್ ಖಾರ್ವಿ ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ದಡ ಸೇರಿ ಬದುಕಿರುವ ಇಬ್ಬರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೋಣಿ ಹಾಗೂ ಬಲೆ ಸಮುದ್ರ ಪಾಲಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.