ಕುಂದಾಪುರ : ಮಹಾಕಾಳಿ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕುಂದಾಪುರ: ಜನಾರೋಗ್ಯ ಸಮಿತಿ ಮತ್ತು ನಮ್ಮ ಕ್ಲಿನಿಕ್ ಖಾರ್ವಿಕೇರಿಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದರೊಂದಿಗೆ, ಸರ್ಕಾರ ಯೋಗ ಶಿಬಿರವನ್ನು ನಡೆಸುತ್ತಿದ್ದು ಅದರ ಪ್ರಯೋಜನ ಪಡೆಯಬಹುದು ಮತ್ತು ನಾವು ಆಹಾರವನ್ನು ಸೇವಿಸುವಾಗ ಜಾಗೂರುಕತೆ ವಹಿಸಬೇಕು. ಆಹಾರ ಪದ್ಧತಿ ಕೂಡ ಬಹಳ ಮುಖ್ಯ.ಆರೋಗ್ಯ ಸುಧಾರಣೆಗೆ ಯೋಗ ಮಾಡಿ ದೇಹವನ್ನು ಹಿಡಿತದಲ್ಲಿ ಇಟ್ಟುಕೊಂಡಲ್ಲಿ ಅನಾರೋಗ್ಯದಿಂದ ದೂರ ಇರಬಹುದು ಎಂದು ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ ಹೇಳಿದರು.

ಅವರು ಕುಂದಾಪುರದ ಖಾರ್ವಿಕೇರಿಯ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ, ವಿದ್ಯಾರಂಗ ಮಿತ್ರ ಮಂಡಳಿ, ಮಹಾಕಾಳಿ ಮಹಿಳಾ ಮಂಡಳಿ, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಿಂಗ್ ಫಿಶರ್ ಮಹಿಳಾ ಘಟಕ ಇವರ ನೇತೃತ್ವದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆ ಮಣಿಪಾಲ ಇದರ ತಜ್ಞ ವೈದ್ಯ ಡಾ.ಅಶ್ವಿನ್ ಕುಮಾರ್ ಮಹಾಪಾತ್ರ ಮಾತನಾಡಿ, ಆರೋಗ್ಯ ತಪಸಣಾ ಶಿಬಿರದ ಪ್ರಯೋಜನ ಪಡೆಯಲು ಕರೆ ನೀಡಿದರು. ಇದೇ ಸಂದರ್ಭ ಶಾಸ್ವಕೋಶ ತಜ್ಞ ಡಾ.ಅಶ್ವಿನ್ ಕುಮಾರ್ ಮಹಾಪಾತ್ರ ಮತ್ತು ಹೃದಯರೋಗ ತಜ್ಞೆ ಡಾ. ನಾಗರತ್ನ ಶೆಣೈ, ಕೊಲೆಸ್ಟ್ರಾಲ್ ತಪಾಸಣೆಗೆ ಸಹಕರಿಸಿದ ರವೀಂದ್ರ ಖಾರ್ವಿ ಜಿಲ್ಲಾ ಆಸ್ಪತ್ರೆ ಉಡುಪಿ ಹಾಗೂ ನಾಗರಾಜ ಖಾರ್ವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಮಹಾಕಾಳಿ ದೇವಸ್ಥಾನ ಅಧ್ಯಕ್ಷ ಅಜಂತಾ ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಾಮೋದರ ಖಾರ್ವಿ, ಶ್ರೀ ಮಹಾಕಾಳಿ ಮಹಿಳಾ ಮಂಡಳಿ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ರಂಜಿತ್ ಖಾರ್ವಿ, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಮಹಿಳಾ ಘಟಕ ಉಪಾಧ್ಯಕ್ಷೆ ಗೀತಾ ಚಂದ್ರಶೇಖರ ಸಾರಂಗ್ ಉಪಸ್ಥಿತರಿದ್ದರು. ಒಟ್ಟು 210 ಮಂದಿ ಚಿಕಿತ್ಸೆ ಪಡೆದರು.
ಮುಕುಂದ ಖಾರ್ವಿ ಪ್ರಾರ್ಥಿಸಿದರು. ಜನ ಆರೋಗ್ಯ ಸಮಿತಿ ಖಾರ್ವಿಕೇರಿ ಇದರ ಅಧ್ಯಕ್ಷ, ಕುಂದಾಪುರ ಪುರಸಭೆಯ ಸದಸ್ಯ ಚಂದ್ರಶೇಖರ ಖಾರ್ವಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಸಿದರು. ದಿನಕರ ಖಾರ್ವಿ ನಿರೂಪಿಸಿ, ಅಶೋಕ ಖಾರ್ವಿ ವಂದಿಸಿದರು.
