ಕೊಲ್ಲೂರು: ಮೂಕಾಂಬಿಕಾ ಡೈಲಿ ಎಕ್ಸ್ಪ್ರೆಸ್ ರೈಲಿಗಾಗಿ ಸಚಿವ ಸೋಮಣ್ಣಗೆ ಸಂಸದ ಬಿ.ವೈ.ರಾಘವೇಂದ್ರ ಮನವಿ

ಕುಂದಾಪುರ: ಪ್ರತೀ ವಾರಕ್ಕೊಮ್ಮೆ ಸಂಚರಿಸುವ 10215/10216 ರೈಲಿಗೆ ಮೂಕಾಂಬಿಕಾ ಎಕ್ಸ್ ಪ್ರೆಸ್ ಎಂದು ಮರುನಾಮಕರಣ ಮಾಡಿ ಪ್ರತಿನಿತ್ಯ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಅಲ್ಲದೇ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವನ್ನು ಸಂಪರ್ಕಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಬೈಂದೂರಿನ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಸೌಲಭ್ಯ ಅಭಿವೃದ್ಧಿ, ಬಿಜೂರು ಹಾಗೂ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಾಯೋಗಿಕ ಮೆಮು, ಮತ್ಸ್ಯಗಂಧ ಹಾಗೂ ಪಂಚಗಂಗಾ ಎಕ್ ಪ್ರೆಸ್ ರೈಲು ನಿಲುಗಡೆಗೆ ಮನವಿ ಮಾಡಿದ್ದಾರೆ.
ಸಂಸದ ರಾಘವೇಂದ್ರ ಅವರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ ಸಂಸದರ ಮನವಿ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಭೇಟಿ ಸಂಧರ್ಭದಲ್ಲಿ ರೈಲ್ವೆ ಸಲಹಾ ಮಂಡಳಿಯ ಮಾಜಿ ಸದಸ್ಯ ಬೈಂದೂರಿನ ವೆಂಕಟೇಶ್ ಕಿಣಿ ಉಪಸ್ಥಿತರಿದ್ದರು.
