ಬಸ್ರೂರು: ಚಲಿಸುತ್ತಿದ್ದ ಬೈಕಿನ ಮೇಲೆ ಮುರಿದು ಬಿದ್ದ ವಿದ್ಯುತ್ ಕಂಬ : ಸವಾರ ಜಸ್ಟ್ ಮಿಸ್
ಕುಂದಾಪುರ: ಕರಾವಳಿಯಾದ್ಯಂತ ಶನಿವಾರ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಹಲವೆಡೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಶನಿವಾರ ಸಂಜೆ ಚಲಿಸುತ್ತಿದ್ದ ಬೈಕಿನ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಬೈಕ್ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಬೈಕ್ ಸವಾರ ಗುಂಡಿಗೋಳಿ ಎಂಬಲ್ಲಿಯ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ವಿದ್ಯುತ್ ಕಂಬ ಬೀಳುವ ಸಂದರ್ಭ ತಂತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ಎನ್ನಲಾಗಿದೆ. ಹಾಗಾಗಿ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಕುಂದಾಪುರದ ವಡೇರಹೋಬಳಿ ಎಂಬಲ್ಲಿ ಭಂಡಾರ್ ಕಾರ್ಸ್ ಕಾಲೇಜು ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಮುರಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಸ್ಥಳೀಯರ ಸಹಕಾರದಿಂದ ರಸ್ತೆಯಲ್ಲಿದ್ದ ಮರವನ್ನು ತೆರವುಗೊಳಿಸಲಾಯಿತು.
ಸಂತೆ ಮಾರ್ಕೆಟ್ ಸಮೀಪ ವಿದ್ಯುತ್ ಕಂಬ ಧರೆಗುರುಳಿದೆ. ಕುಂದಾಪುರದಲ್ಲಿ ಬೆಳಿಗ್ಗೆಯಿಂದ ಗಾಳಿ ಮಳೆ ಜೋರಾಗಿತ್ತು. ಕಡಲುಬ್ಬರ ಹೆಚ್ಚಾಗಿತ್ತು. ಜನಸಂಚಾರ ಎಂದಿಗಿಂತ ಕಡಿಮೆಯಾಗಿತ್ತು. ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿತ್ತು.
