ಸ್ಕಾರ್ಪಿಯೋ ವಾಹನದಲ್ಲಿ ದನ ತುಂಬಿಸಿ ಸಾಗಾಟ- ಪ್ರಕರಣ ದಾಖಲು
ಕುಂದಾಪುರ: ಇಲ್ಲಿಗೆ ಸಮೀಪದ ಬಿದ್ಕಲ್ ಕಟ್ಟೆ ಎಂಬಲ್ಲಿ ಶನಿವಾರ ಬೆಳಗ್ಗಿನ ಜಾವ ರಸ್ತೆ ಬದಿಯಲ್ಲಿ ಮಲಗಿದ್ದ ದನವೊಂದನ್ನು ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ತುಂಬಿಸಿ ಕದ್ದೊಯ್ದ ಘಟನೆ ನಡೆದಿದೆ. ಘಟನೆಯು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ನಸುಕಿನ ಜಾವದಲ್ಲಿ ಹುಣ್ಸೆಮಕ್ಕಿ ಕಡೆಯಿಂದ ಒಂದು ಸ್ಕಾರ್ಪಿಯೊ ತರಹದ ನಾಲ್ಕು ಚಕ್ರದ ವಾಹನದಲ್ಲಿ ಯಾರೋ 3 ಜನ ಕಳ್ಳರು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬಿದ್ಕಲಕಟ್ಟೆ ಪೇಟೆಯ ಬಳಿ ವಾಹನದಿಂದ ಕೆಳಗೆ ಇಳಿದು ಅಲ್ಲಿಯೇ ಮಲಗಿದ್ದ ಒಂದು ಹಸುವನ್ನು ಹಿಡಿದು ಅದಕ್ಕೆ ಬಳ್ಳಿಯಿಂದ ಕುತ್ತಿಗೆಗೆ ಬಿಗಿದು ಅದನ್ನು ಹಿಂಸಾತ್ಮಕವಾಗಿ ಎಳೆದು ಅವರು ಬಂದಿರುವ ವಾಹನಕ್ಕೆ ತುಂಬಿಸಿ ಕಳವು ಮಾಡಿಕೊಂಡು ಬಿದ್ಕಲಕಟ್ಟೆಯಿಂದ ಶಿರಿಯಾರ ಕಡೆಗೆ ಹೋಗಿರುವುದು ಕೆಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜಯಪ್ರಕಾಶ್ ಶೆಟ್ಟಿ ಎಂಬುವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
