ಗಂಗೊಳ್ಳಿ ದೋಣಿ ದುರಂತ: 46ಗಂಟೆಗಳ ಬಳಿಕ ದಡ ಸೇರಿದ ಮೂರನೇ ಮೃತ ದೇಹ

ಕುಂದಾಪುರ: ಮಂಗಳವಾರ ಬೆಳಿಗ್ಗೆ ಗಂಗೊಳ್ಳಿಯ ಅಳಿವೆ ಬಾಗಿಲಿನಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಸಿಪಾಯಿ ಸುರೇಶ್ ಖಾರ್ವಿ ಅವರ ಮೃತ ದೇಹ ಗುರುವಾರ ಬೆಳಿಗ್ಗಿನ ಜಾವ 6 ಗಂಟೆ ಸುಮಾರಿಗೆ ಕೋಡಿ ಸೀವಾಕ್ ಸಮೀಪದ ಕಡಲ ತೀರದಲ್ಲಿ ಪತ್ತೆಯಾಗಿದೆ.
ಸಮುದ್ರದ ನೈಸರ್ಗಿಕ ಪ್ರಕ್ರಿಯೆಯಂತೆ ದೋಣಿ ದುರಂತದಲ್ಲಿ ನಾಪತ್ತೆಯಾದವರ ಮೃತ ದೇಹಗಳನ್ನು ಒಬ್ಬೊಬ್ಬರಾದಂತೆ ಕಡಲು ತನ್ನ ತೀರಕ್ಕೆ ಎಳೆದು ಹಾಕಿದೆ. ಇದರಿಂದ ನಾಪತ್ತೆಯಾದ ಮೂವರು ಮೀನುಗಾರರ ಮೃತದೇಹಗಳು 12 ಗಂಟೆಗಳ ಅಂತರದಲ್ಲಿ ದಡ ಸೇರಿದಂತಾಗಿದೆ.
ನಾಪತ್ತೆಯಾದವರ ಶೋಧಕ್ಕಾಗಿ ಅಗ್ನಿಶಾಮಕದಳ, ಕರಾವಳಿ ಪೊಲೀಸ್, ಮುಳುಗು ತಜ್ಞರು ನಿರಂತರ ಪ್ರಯತ್ನ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಶನಿವಾರ ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಗಂಗೊಳ್ಳಿಗೆ ಆಗಮಿಸಿ ಪರಿಹಾರ ಧನದ ಚೆಕ್ ವಿತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
