ಪಾಂಗಾಳದಲ್ಲಿ ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪರಾರಿ – ಬೈಂದೂರು ಮೂಲದ ರಿಕವರಿ ಪರ್ಸನ್ ಗಂಭೀರ!

ಕುಂದಾಪುರ: ಉಡುಪಿ ಸಮೀಪದ ಪಾಂಗಾಳದಲ್ಲಿ ಸ್ಕೂಟರ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು, ಬೈಂದೂರು ಸಮೀಪದ ಹೇರಂಜಾಲು ಗುಡೇ ದೇವಸ್ಥಾನದ ಸಮೀಪದ ನಿವಾಸಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಬೈಂದೂರಿನ ಹೇರಂಜಾಲು ಗುಡೇ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪವಾಸಿ ನಾರಾಯಣ ಮಡಿವಾಳ ಹಾಗೂ ಪದ್ದು ಮಡಿವಾಳ ದಂಪತಿಗಳ ಎರಡನೇ ಮಗ ಮಹೇಶ್ ಮಡಿವಾಳ(30) ಎಂದು ಗುರುತಿಸಲಾಗಿದೆ.

ಮಹೇಶ್ ಮಡಿವಾಳ ಬ್ಯಾಂಕೊಂದರಲ್ಲಿ ರಿಕವರಿ ಪರ್ಸನ್ ಆಗಿ ಕೆಲಸ ಮಾಡಿಕೊಂಡಿದ್ದರು. ಅದರಂತೆ ಇಂದು ಬೆಳಿಗ್ಗೆ ರಿಕವರಿ ಉದ್ದೇಶದಿಂದ ಪರ್ಕಳದ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಇದೇ ಸಂದರ್ಭ ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಮಹೇಶ್ ಗಂಭೀರ ಗಾಯಗೊಂಡಿದ್ದಾರೆ.

ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಮಹೇಶ್ ಅವರ ಡ್ರೈವಿಂಗ್ ಲೈಸೆನ್ಸ್ ಮೂಲಕ ಗುರುತು ಪತ್ತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಅಪಘಾತವೋ ಅಥವಾ ಕೊಲೆಯತ್ನವೋ ಎನ್ನುವುದು ಪೊಲಿಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.