ಕೊನೆಗೂ ಖೆಡ್ಡಾಗೆ ಬಿತ್ತು ಕಾಡಾನೆ- ಮೂರು ದಿನಗಳ ಕಾರ್ಯಾಚರಣೆ ಯಶಸ್ವಿ

ಕುಂದಾಪುರ: ಕಾಡಿನಿಂದ ದಾರಿ ತಪ್ಪಿ ಊರಿಗೆ ಬಂದು ಅಂಡಲೆಯುತ್ತಾ ಆತಂಕದ ವಾತಾವರಣ ಸೃಷ್ಟಿಸಿದ್ದ ಕಾಡಾನೆ ಗುರುವಾರ ಸಂಜೆ ಗಜಪಡೆಯ ಮೂಲಕ ಅರಣ್ಯಾಧಿಕಾರಿಗಳಿಂದ ಬಂಧಿಸಲ್ಪಟ್ಟಿದೆ. ಇದೀಗ ಸಿದ್ಧಾಪುರದ ಆಸುಪಾಸಿ ಜನರು ನಿಟ್ಟುಸಿರು ಬಿಟ್ಟಿದ್ದು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಆತಂಕ ಸೃಷ್ಟಿಸಿದ್ದರೂ ಯಾವುದೇ ಅಪಾಯ ಮಾಡದ ಕಾಡಾನೆಯ ನಡವಳಿಕೆ ಬಗ್ಗೆ ಸಾರ್ವಜನಿಕರು ಅನುಕಂಪ ವ್ಯಕ್ತಪಡಿಸಿದ್ದಾರೆ.


ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಲನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ನಡೆಯುವ ಪರಿಸರದಲ್ಲಿ ನಿಷೇಧಾಜ್ಞೆ ವಿಧಿಸಲಾಯಿತು. ಬಳಿಕ ಹೆನ್ನಾಬೈಲು – ಗೆದ್ದೋಡಿ ನಡುವಿನ ಎಂಬಲ್ಲಿ ಸಂಜೆಯ ವೇಳೆ ಆನೆಯ ಇರುವಿಕೆಯನ್ನು ಪತ್ತೆ ಮಾಡಲಾಯಿತು. ಸಂಜೆಯ 5 ಗಂಟೆಯ ವೇಳೆಗೆ ಸಾಕಾನೆಗಳ ಮೂಲಕ ಊರ್ ಪಾಲ್ ಚಿನ್ನಾಬೇರು ಎಂಬಲ್ಲಿ ಆನೆ ಇರುವುದನ್ನು ಪತ್ತೆ ಮಾಡಲಾಯಿತು.ಶಿವಮೊಗ್ಗದ ಡಾ.ಎಸ್.ಕಲ್ಲಪ್ಪ, ನಾಗರಹೊಳೆಯ ಡಾ.ರಮೇಶ್ ಹಾಗೂ ಮಂಗಳೂರಿನ ಡಾ.ಯಶಸ್ವಿ ಅವರುಗಳಿದ್ದ ಕಾರ್ಯಾಚರಣೆಯ ವೈದ್ಯರ ತಂಡ 1.2 ಎಂ.ಎಲ್ ಪ್ರಮಾಣದ ಎಟಾರ್ಫಿನ್ ಔಷಧಿಯ ಅರವಳಿಕೆ ಮದ್ದನ್ನು ಆನೆಗೆ ಇಂಜೆಕ್ಟ್ ಮಾಡಲಾಯಿತು. ಸುಮಾರು 20 ನಿಮಿಷದ ಬಳಿಕ ಆನೆ ಪ್ರಜ್ಞೆ ತಪ್ಪಿತು. ಬಳಿಕ ಸಂಜೆ 7-30 ರ ಸುಮಾರಿಗೆ ನಾಗರಹೊಳೆ ಮತ್ತಿಗೋಡು ಅರಣ್ಯ ವಲಯದಿಂದ ಭೀಮ, ಮಹೇಂದ್ರ ಹಾಗೂ ಏಕಲವ್ಯ ಎನ್ನುವ ಹೆಸರಿನ ಮೂರು ಪಳಗಿದ ಆನೆಗಳನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು. ಭೀಮನ ನೇತೃತ್ವದಲ್ಲಿ ನಾಲ್ಕು ಆನೆಗಳ ತಂಡ ಹಾಗೂ ಕ್ರೇನ್ ಸಹಾಯದಿಂದ ವಾಹನದಲ್ಲಿ ಮಲಗಿಸಿ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಯಿತು.


ಕಾರ್ಯಾಚರಣೆಯಲ್ಲಿ ಸಕ್ರೆಬೈಲಿನ ಆನೆ ಶಿಬಿರದಿಂದ ಬಾಲಚಂದ್ರ, ಸೋಮಣ್ಣ, ಬಹಾದ್ದೂರ್, ಹಾಗೂ ಮೈಸೂರು ಆನೆ ಶಿಬಿರದಿಂದ ೇಕಲವ್ಯ, ಭೀಮ ಹಾಗೂ ಮಹೇಂದ್ರ ಎಂಬ ಹೆಸರಿನ ಆನೆಗಳು ಭಾಗವಹಿಸಿದ್ದವು. ಚಿಕ್ಕಮಗಳೂರಿನ ಎಟಿಎಫ್ ತಂಡ ಭಾಗವಹಿಸಿತ್ತು. ಹಾಸನದ ಅರಣ್ಯ ವಿಭಾಗದಿಂದ ಔಷಧಿಗಳನ್ನು ತರಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆಯಲ್ಲಿ ಸುಮಾರು 150 ಸಿಬ್ಬಂದಿಗಳು ಭಾಗಿಯಾಗಿದ್ದರು. ಕುದುರೆಮುಖ ಅರಣ್ಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಕುಂದಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ್ ಪೂಜಾರಿ, ದಿನೇಶ್, ಸಕ್ರೆಬೈಲು ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ವಿನಯ್ ಜಿ.ಆರ್, ಸಿದ್ದಾಪುರ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಜಿ.ವಿ. ನಾಯ್ಕ್, ಶಂಕರನಾರಾಯಣ ವಲಯಾರಣ್ಯಾಧಿಕಾರಿ ಜ್ಯೋತಿ, ಶಂಕರನಾರಾಯಣ ಪೊಲೀಸ್ ಠಾಣೆಯ ಎಸ್ಐ ನಾಸೀರ್ ಹುಸೇನ್ ಇದ್ದರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್ ಹಾಗೂ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.