ಉಪ್ಪುಂದದಲ್ಲಿ 25 ವರ್ಷಗಳ ಹಿಂದಿನ ಎಸೆಸೆಲ್ಸಿ ಬ್ಯಾಚ್ ನಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನೆ


ಬೈಂದೂರು: ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಂದ ಇಲ್ಲಿಯ 1999-2000ನೇ ಇಸವಿಯ ಎಸ್ಸೆಸ್ಸೆಲ್ಸಿ ಬ್ಯಾಚಿನ ಸ್ನೇಹ ಸಮ್ಮಿಲನ ಕಾರ್ಯಕ್ರಮ, ಗುರುವಂದನೆ, ಶಾಲೆಗೆ ಕೊಡುಗೆಗಳ ಹಸ್ತಾಂತರ ಹಾಗೂ ವಿದ್ಯಾರ್ಥಿ ಜೀವನದ ವಿಶೇಷ ಸನ್ನಿವೇಶಗಳನ್ನು ಮರುಸೃಷ್ಟಿಸುವ ವುಶೇಷ ಕಾರ್ಯಕ್ರಮ ಭಾನುವಾರ ಉಪ್ಪುಂದದಲ್ಲಿ ನಡೆಯಿತು. ಹೈಸ್ಕೂಲ್ ವಿಭಾಗಕ್ಕೆ ಒಂದು ಲಕ್ಷ ಮೌಲ್ಯದ ಕಂಪ್ಯೂಟರ್ ಇನ್ವರ್ಟರ್ ಮತ್ತು ಮಿನಿ ಜೆರಾಕ್ಸ್ ಮಷೀನ್ ಅನ್ನು ಕೊಡುಗೆಯಾಗಿ ನೀಡಿ ಪ್ರಸ್ತುತ ಸಾಲಿನ ಶಿಕ್ಷಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.










ಬೈಂದೂರು ಶಾಸಕ ಗುರುರಾಜ ಗಂಟೆಹೊಳೆಯವರು ಕಲಿತ ಶಾಲೆಗೆ ಕೊಡುಗೆಗಳನ್ನು ಹತ್ತಾಂತರಿಸಿ, ಕೆಲಹೊತ್ತು ಕಲಿಸಿದ ಶಿಕ್ಷಕರೊಂದಿಗೆ ಕಳೆದರು. ಬಳಿಕ ಮಾತನಾಡಿ, ಸುವರ್ಣ ಮಹೋತ್ಸವ ಹೊತ್ತಿನಲ್ಲಿರುವ ಈ ಕಾಲೇಜಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆದ ಈ ಅರ್ಥಪೂರ್ಣ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮುಂದೆ ಹಲವು ಕಾರ್ಯಕ್ರಮಗಳ ಸಾಧ್ಯತೆಗೆ ಅವಕಾಶ ಮಾಡಿಕೊಡಲಿದೆ ಎಂದು ಶುಭ ಹಾರೈಸಿದರು.










ಇದೇ ಸಂದರ್ಭ ಅಂದಿನ ಶಿಕ್ಷಕರಾದ ಪ್ರಭಾಕರ್ ಎನ್ ಹೆಗಡೆ, ಜಯರಾಮ ಶೆಟ್ಟಿ, ನಾಗಯ್ಯ ಮಾಸ್ಟರ್, ವೆಂಕಟರಮಣ ಶೇರುಗಾರ್, ಶ್ರೀಧರ್ ಭಟ್ ಮೊಗೇರಿ, ಭಾಸ್ಕರ್ ಮಯ್ಯ, ಸರೋಜಿನಿ ನಾಯ್ಕ್, ಸತ್ಯನಾರಾಯಣ, ನಾಗರಾಜ ಎಸ್ , ಸವಿತಾ ಮಯ್ಯ, ಹಾಗೂ ಅಂದು ಕ್ಲರ್ಕ್ ಆಗಿದ್ದ ಗೋವಿಂದ ಗಾಣಿಗ ಇವರನ್ನು ವಿದ್ಯಾರ್ಥಿಗಳು ಸನ್ಮಾನಿಸಿ ಪಾದಸ್ಪರ್ಶ ಮಾಡಿ ಗುರು ವಂದನೆ ಸಲ್ಲಿಸಿದರು.










ಹಿರಿಯ ವಿದ್ಯಾರ್ಥಿ ಓಂ ಗಣೇಶ್ ಉಪ್ಪುಂದ ರವರು ಮಾತನಾಡಿ ಕಾಲೇಜು ಪ್ರಾರಂಭವಾದಂದಿನಿಂದ ಮೊದಲುಗೊಂಡು ಬೆಳೆದು ಬಂದ ದಾರಿ ಹಾಗೂ ನಡೆದ ಮುಖ್ಯ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ.ಎಸ್ ಸುರೇಶ್ ಶೆಟ್ಟಿ , ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ಚಂದ್ರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಚಂದ್ರ,ಎಸ್ಡಿಎಂಸಿ ಅಧ್ಯಕ್ಷ ಶ್ರೀಧರ್ ಗಾಣಿಗ ಉಪ ಉಪ ಪ್ರಾಂಶುಪಾಲ ಚಂದ್ರಹಾಸ ಗೌಡ ಮತ್ತಿತರರು ಶುಭ ಹಾರೈಸಿದರು.









ಬೆಳಿಗ್ಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಸತ್ಯನಾರಾಯಣ ಇವರ ನೇತೃತ್ವದಲ್ಲಿ ಅಂದಿನ ಶೈಲಿಯಲ್ಲಿ ಅಸೆಂಬ್ಲಿ ಮತ್ತು ಪ್ರಾರ್ಥನೆ ನಡೆಯಿತು. ಬಳಿಕ ತರಗತಿಗೆ ತೆರಳಿ ಶಿಕ್ಷಕರ ಬೆತ್ತದೇಟಿನ ರುಚಿಯನ್ನು ಸವಿದು ಶಿಕ್ಷಕರಿಂದ ಹಾಜರಿಯನ್ನು ಕರೆಯಿಸಿಕೊಂಡು










ಭಾಸ್ಕರ ಮಯ್ಯ, ವೆಂಕಟರಮಣ ಸರ್, ಹಾಗೂ ಮೇಡಂ ಇವರಿಂದ ಪಾಠವನ್ನು ಕೇಳಿ ತಾವು 25 ವರ್ಷಗಳ ಹಿಂದೆ ಕುಳಿತ ಅದೇ ಬೆಂಚಿನ ಅದೇ ಸ್ಥಳದಲ್ಲಿ ಕುಳಿತು ತಮ್ಮ ವಿದ್ಯಾರ್ಥಿ ಜೀವನದ ಅನುಪಮ ಕ್ಷಣಗಳನ್ನು ಮೆಲಕು ಹಾಕಿದರು. 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರದೂರುಗಳಿಂದ ಆಗಮಿಸಿ ಒಂದುಗೂಡಿ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ ಇದರ ಅಂಗಳದಲ್ಲಿ ಶಿಸ್ತುಬದ್ದ ಕಾರ್ಯಕ್ರಮ ನಡೆಸಿದ್ದು ಅಪಾರ ಜನ ಮೆಚ್ಚುಗೆಗೆ ಪಾತ್ರವಾಯಿತು.