ಕುಂದಾಪುರ: ಮಾಜೀ ಆಟಗಾರ, ಧಾರ್ಮಿಕ ಮುಖಂಡ, ಉದ್ಯಮಿ ಜಯಾನಂದ ಖಾರ್ವಿ ಹೃದಯಾಘಾತದಿಂದ ಸಾವು

ಕುಂದಾಪುರ: 80-90ರ ದಶಕದಲ್ಲಿ ಕುಂದಾಪುರವನ್ನು ಕ್ರೀಡಾ ಕ್ಷೇತ್ರದಲ್ಲಿ ಪ್ರತಿನಿಧಿಸಿ ಹೆಸರು ಮಾಡಿದ್ದ, ಕುಂದಾಪುರದ ಖಾರ್ವಿಕೇರಿ ನಿವಾಸಿ ಜಯಾನಂದ ಖಾರ್ವಿ(60) ಭಾನುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಧಾರ್ಮಿಕ ಮುಖಂಡರೂ ಆಗಿದ್ದ ಜಯಾನಂದ ಖಾರ್ವಿ ಉದ್ಯಮಿಯಾಗಿಯೂ ಹೆಸರು ಮಾಡಿದ್ದರು. ಕುಂದಾಪುರದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳು ನಡೆದರೂ ಜಯಾನಂದ ಖಾರ್ವಿ ಮುಂಚೂಣಿಯ ನಾಯಕತ್ವ ವಹಿಸಿಕೊಳ್ಳುತ್ತಿದ್ದವರು. ಖಾರ್ವಿಕೇರಿಯ ಶ್ರೀ ಮಹಂಕಾಳಿ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಮಣಿಪಾಲದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ.