ಶಿರೂರು: ಗ್ರೀನ್ ವ್ಯಾಲೀ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗೆ ಹಲ್ಲೆ : ವಿಡಿಯೋ ವೈರಲ್


ಕುಂದಾಪುರ: ಕೆಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿರುವ ಗ್ರೀನ್ ವ್ಯಾಲೀ ಇಂಟರ್ನ್ಯಾಷನಲ್ ಶಾಲೆ (ಸಿ.ಐ.ಎಸ್.ಇ) ನಡೆಯುತ್ತಿದೆ ಎನ್ನಲಾಗುತ್ತಿರುವ ದೌರ್ಜನ್ಯಗಳಿಗೆ ಪೂರಕವಾದ ಸಿಸಿಟಿವಿ ಫೂಟೇಜೊಂದು ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಗಳ ಜೊತೆಗೆ ತಲ್ಲಣ ಮೂಡಿಸಿದೆ.

ಕಳೆದ ವರ್ಷ ನವೆಂಬರ್ ತಿಂಗಳಿನ ಒಂಭತ್ತನೇ ತಾರೀಖಿನಂದು (9.11.2024) ಮಧ್ಯಾಹ್ನ ಊಟದ ಸಮಯದಲ್ಲಿ ಊಟಕ್ಕೆ ಕಳಿಸದೇ ಶಾಲೆಯ ಚೀಪ್ ಕೊ-ಆರ್ಡಿನೇಟರ್ ಕಚೇರಿಯಲ್ಲಿ ಕೂಡಿ ಹಾಕಿ ಬಾಗಿಲು ಹಾಕಿ ವಿದ್ಯಾರ್ಥಿಯೊಬ್ಬನಿಗೆ ತೀವ್ರತರದ ಹಲ್ಲೆ ನಡೆದಿರುವುದು ವಿಡಿಯೋದ ಮೂಲಕ ಬೆಳಕಿಗೆ ಬಂದಿದೆ. ಆ ಮೂಲಕ ಆರು ತಿಂಗಳ ಹಿಂದಿನ ಪ್ರಕರಣವೊಂದು ಇದ್ದಕ್ಕಿದ್ದಂತೆ ಬೆಳಿಕಗೆ ಬಂದಿದೆ.

ವೈರಲ್ಲಾಗುತ್ತಿರುವ ವಿಡಿಯೋದಲ್ಲಿ ಜಿಯೋಗ್ರಫಿ ವಿಭಾಗದ ಹೆಚ್.ಒ.ಡಿ ಆಗಿರುವ ವಿನಾಯಕ್ ಖಾರ್ವಿ ಎಂಬಾತ ಅದೇ ಕಾಲೇಜಿನ ಮುಖ್ಯ ಸಂಯೋಜಕಿಯಾಗಿರುವ ವೆಲ್ಮಿನಾ ಮ್ಯಾಥ್ಯೂ ಎಂಬುವಳ ಆಡಳಿತ ಕೋಣೆಯೊಳಗೆ ಬಾಗಿಲು ಹಾಕಿಕೊಂಡು ಗಂಭೀರ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಉಪನ್ಯಾಸಕಿ ಅಕ್ಷತಾ ಹಾಗೂ ಮತ್ತೊಬ್ಬ ವಿದ್ಯಾರ್ಥಿ ರಿಷಿ ಎದುರಿಗೇ ಹಲ್ಲೆ ನಡೆಸುತ್ತಿದ್ದರೂ ವಿನಾಯಕ ಖಾರ್ವಿ ಹಲ್ಲೆ ನಡೆಸುತ್ತಿರುವುದನ್ನು ತಡೆಯುವ ಪ್ರಯತ್ನ ಮಾಡಿಲ್ಲದಿರುವುದೂ ಖಂಡನೆಗೆ ಕಾರಣವಾಗಿದೆ.

ಈ ಬಗ್ಗೆ ಜಿವಿಐಎಸ್_07 (GVIS_07) ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೆರ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಅಧಿಕಾರಿಗಳಿಗೆ, ರಾಷ್ಟ್ರೀಯ ರಾಜಕೀಯ ಮುಖಂಡರಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಲಾಗಿದೆ. ಇನ್ಸ್ಟಾ ಖಾತೆಯಲ್ಲಿ ವಿಡಿಯೋದ ಜೊತೆಗೆ ಬರಹವನ್ನು ಸೇರಿಸಿದ್ದು, ಈ ಘಟನೆಯ ಸಮಯದಲ್ಲಿ, ಯಾರೂ ಜಗಳವನ್ನು ತಡೆಯಲು ಅಥವಾ ಮಧ್ಯಪ್ರವೇಶಿಸಲು ಪ್ರಯತ್ನಿಸಲಿಲ್ಲ, ನಿಂದನೆ ಮುಂದುವರಿಯಲು ಅವಕಾಶ ಮಾಡಿಕೊಟ್ಟರು. ಈಗ ಸಿಸಿಟಿವಿ ದೃಶ್ಯಾವಳಿಗಳು ಸೋರಿಕೆಯಾಗಿವೆ, ಇದು ವಿದ್ಯಾರ್ಥಿಗಳು ವರ್ಷಗಳಿಂದ ಎದುರಿಸುತ್ತಿರುವುದನ್ನು ದೃಢಪಡಿಸುತ್ತದೆ. ಶಾಲಾ ಮಂಡಳಿ ಮತ್ತು ಟ್ರಸ್ಟಿಯು ಹಿರಿಯ ಮಟ್ಟದ ಸಿಬ್ಬಂದಿ ಕೊಠಡಿಗಳು ಮತ್ತು ಹಾಸ್ಟೆಲ್ ಪ್ರದೇಶಗಳಿಂದ ಎಲ್ಲಾ ದೃಶ್ಯಗಳನ್ನು ಪರಿಶೀಲಿಸಬೇಕು ಮತ್ತು ಜವಾಬ್ದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಹಿಂಸೆ, ಭಯ ಮತ್ತು ದುಷ್ಕೃತ್ಯವಲ್ಲ ಸುರಕ್ಷಿತ, ನ್ಯಾಯಯುತ ಮತ್ತು ಗೌರವಾನ್ವಿತ ವಾತಾವರಣಕ್ಕೆ ಅರ್ಹರು ಎಂದು ಬರೆಯಲಾಗಿದೆ.

ಘಟನೆಯಿಂದ ಉಡುಪಿ ಜಿಲ್ಲೆಗೆ ಕಪ್ಪು ಚುಕ್ಕಿಯಿಟ್ಟಿದ್ದು, ಸಂಬಂಧಪಟ್ಟ ಇಲಾಖೆಗಳು, ಮಕ್ಕಳ ಹಕ್ಕುಗಳ ಆಯೋಗ, ಮಾನವ ಹಕ್ಕುಗಳ ಆಯೋಗಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪ್ರಕರಣ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವರೇ ಕಾದು ನೋಡಬೇಕಿದೆ.