AccidentBlogCrime newsEconomyGovernmentHealthHighlightsHuman storiesLifestyleLocal newsObituaryState newsTop StoriesTrendingWomen Care

ಸಾಲಬಾಧೆಗೆ ಹೆದರಿ ಬಾವಿಗೆ ಹಾರಿದ ಅಪ್ಪ, ರಕ್ಷಿಸಲು ಹೋದ ಮಗ ಮತ್ತು ತಾಯಿ! ಅಪ್ಪ-ಮಗ ಸಾವು, ತಾಯಿ ಗಂಭೀರ

Aware others:

ಕುಂದಾಪುರ: ಕಷ್ಟಪಟ್ಟು ದುಡಿದು ತಿನ್ನುವ ಕುಟುಂಬವೊಂದು ಮಾಡಿಕೊಂಡ ಸಾಲಬಾಧೆಗೆ ಹೆದರಿ ಬಾವಿಗೆ ಹಾರಿ, ಅಪ್ಪ ಮಗ ಸಾವನ್ನಪ್ಪಿ ತಾಯಿ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು (ಗುರುವಾರ) ಬೆಳಿಗ್ಗೆ ನಡೆದಿದೆ.

ಮಾಧವ ದೇವಾಡಿಗ (56)

ತೆಕ್ಕಟ್ಟೆಯ ಕಂಚುಗಾರಬೆಟ್ಟು ಎಂಬಲ್ಲಿನ ನಿವಾಸಿಗಳಾಗಿರುವ, ಕುಂದಾಪುರದ ಅಂಕದಕಟ್ಟೆಯಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿರುವ ಮಾಧವ ದೇವಾಡಿಗ (56) ಹಾಗೂ ಅವರ ಪುತ್ರ ಪ್ರಸಾದ್ ದೇವಾಡಿಗ (22) ಸಾವನ್ನಪ್ಪಿದರೆ ಮಾಧವ ದೇವಾಡಿಗರ ಪತ್ನಿ ತಾರಾ ದೇವಾಡಿಗ ಗಂಭೀರಗೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಪ್ರಸಾದ್ ದೇವಾಡಿಗ (22)

ತೆಕ್ಕಟ್ಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಮಾಧವ ದೇವಾಡಿಗರ ಕುಟುಂಬ ಕೈತುಂಬಾ ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ. ಸಾಲಗಾರರು ಮನೆ ಬಾಗಿಲಿಗೆ ಬರುತ್ತಿದ್ದು, ಇದರಿಂದ ಮರ್ಯಾದೆಗೆ ಹೆದರಿದ್ದ ಮಾಧವ ದೇವಾಡಿಗ ಗುರುವಾರ ಬೆಳಿಗ್ಗೆ ಮನೆ ಸಮೀಪದ ಬಾವಿಗೆ ಹಾರಿದ್ದಾರೆ. ಇದರಿಂದ ಗಾಬರಿಗೊಂಡ ಅವರ ಪುತ್ರ ಪ್ರಸಾದ್ ತಂದೆಯನ್ನು ರಕ್ಷಿಸಲೆಂದು ಹಿಂದೆ ಮುಂದೆ ನೀಡದೇ ತಾನೂ ಬಾವಿಗೆ ಹಾರಿದ್ದಾನೆ. ಬೊಬ್ಬೆ ಕೇಳಿ ಓಡಿ ಬಂದ ತಾಯಿ ತಾರಾ ದೇವಾಡಿಗ ಗಂಡ ಮತ್ತು ಮಗನನ್ನು ರಕ್ಷಣೆ ಮಾಡಲೆಂದು ತಾನೂ ಬಾವಿಗೆ ಹಾರಿದ್ದಾರೆ. ಆದರೆ ಅದಾಗಲೇ ಮಾಧವ ದೇವಾಡಿಗ ಹಾಗೂ ಪ್ರಸಾದ್ ದೇವಾಡಿಗ ಸಾವನ್ನಪ್ಪಿದ್ದು, ಈಜು ಗೊತ್ತಿದ್ದ ತಾರಾ ದೇವಾಡಿಗ ಗಂಭೀರಗೊಂಡಿದ್ದಾರೆ.

ತಾರಾ ದೇವಾಡಿಗ

ಘಟನೆ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಸಂತೋಷ್ ಎಂಬುವರು ತಾಯಿ ತಾರಾ ದೇವಾಡಿಗರನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಕೋಟ ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಅಪ್ಪ ಮಗನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಗಂಭೀರಗೊಂಡ ತಾಯಿ ತಾರಾ ದೇವಾಡಿಗರನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮಾಧವ ದೇವಾಡಿಗ ಅವರು ಕುಂದಾಪುರ ಪುರಸಭೆಯ ಸದಸ್ಯ ಜಿ.ಕೆ.ಗಿರೀಶ್ ಅವರ ಸಹೋದರ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಕುಮದಾಪುರದ ಸರ್ಕಾರೀ ಶವಾಗಾರದಲ್ಲಿ ಇರಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!