ಕೋಟ: ಮೇ 13ರಂದು ಕೋಟದಲ್ಲಿ ಹಸಿರು ಸೇನೆಯಿಂದ ಬೃಹತ್ ರೈತ ಚಳುವಳಿಗೆ ಕರೆ

ಕುಂದಾಪುರ: ತೆಕ್ಕಟ್ಟೆ, ಉಳ್ತೂರು, ಬೇಳೂರು, ಗಿಳಿಯಾರು, ಕಾರ್ತಟ್ಟು, ಚಿತ್ರಪಾಡಿ, ಬನ್ನಾಡಿ, ಉಪ್ಲಾಡಿ, ಸಾಲಿಗ್ರಾಮ ಹೀಗೆ 14ಗ್ರಾಮಗಳ ರೈತರ ಜೀವನಾಡಿಯಾಗಿರುವ ಸುಲ್ದಪು ಮಡಿವಾಳಸಾಲು ಹೊಳೆ ಹೂಳು ಸಮಸ್ಯೆ ಪರಿಹಾರ ಕಾಣದೆ ಕಂಗೆಟ್ಟಿರುವ ರೈತರು ಮೇ 13ರಂದು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಾಗಿದ್ದಾರೆ.
ಹದಿನಾಲ್ಕು ಗ್ರಾಮಗಳ ರೈತರ ಸಂಘಟನೆಯಾಗಿರುವ ಹಸಿರು ಸೇನೆ ಕೋಟ ಈ ಬಗ್ಗೆ ಕೋಟ ಮಾಂಗಲ್ಯ ಮಂದಿರದಲ್ಲಿ ಸಭೆ ಸೇರಿ ಹೋರಾಟದ ನಿರ್ಣಯವನ್ನು ಕೈಗೊಂಡಿದ್ದು, ಮೇ 13ರಂದು ಬೃಹತ್ ರೈತ ಚಳುವಳಿಗೆ ಹಸಿರು ಸೇನೆ ಕೋಟ ಕರೆಕೊಟ್ಟಿದೆ.
ಕೋಟ ಸುತ್ತಮುತ್ತಲಿನ ವ್ಯಾಪ್ತಿಯ ರೈತರು ಕೃತಕ ನೆರೆ ಹಾವಳಿಗೆ ಈಡಾಗುತ್ತಿದ್ದು ಈ ಸಮಸ್ಯೆಯ ಪರಿಹಾರಕ್ಕಾಗಿ ಹಲವಾರು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತ ಪ್ರಮುಖರೆಲ್ಲರೂ ಕೋಟ ಮಾಂಗಲ್ಯ ಮಂದಿರದಲ್ಲಿ ಸಭೆ ಸೇರಿ ಹೋರಾಟದ ನಿರ್ಣಯವನ್ನು ಕೈಗೊಂಡಿದ್ದಾರೆ.
ಮೇ 13ರಂದು ಕೋಟ ಬನ್ನಾಡಿ ರಾಜ್ಯ ಹೆದ್ದಾರಿಯ ಮಗ್ಗುಲಲ್ಲಿ 2000ಕ್ಕೂ ಅಧಿಕ ರೈತರಿಂದ ರಾಜ್ಯಮಟ್ಟದ ರೈತ ನಾಯಕರ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಹಸಿರು ಸೇನೆ ಹೇಳಿದೆ. ಪೂರ್ವಭಾವಿ ಸಭೆಯಲ್ಲಿ ಭರತ್ ಕುಮಾರ್ ಶೆಟ್ಟಿ, ರಾಜು ಪೂಜಾರಿ ಕಾರ್ಕಡ ಶಾಮ್ ಸುಂದರ್ ನಾಯಿರಿ, ಪ್ರಶಾಂತ್ ಶೆಟ್ಟಿ ಉಳ್ತೂರು, ಅಜಿತ್ ದೇವಾಡಿಗ ಕೋಟ, ಚಂದ್ರ ಪೂಜಾರಿ ಕದ್ರಿ ಕಟ್ಟು, ರವೀಂದ್ರ ಐತಾಳ್, ವಸಂತ ಗಿಳಿಯಾರು, ರಾಜಾರಾಮ್ ಶೆಟ್ಟಿ ಗಿಳಿಯಾರು, ಪ್ರಸಾದ್ ಬಿಲ್ಲವ, ಬೇಳೂರು ದಿನೇಶ್ ಶೆಟ್ಟಿ, ಗಿರೀಶ್ ಗಾಣಿಗ ಬೆಟ್ಲಕ್ಕಿ, ಸಂತೋಷ ಪೂಜಾರಿ ಕಂಬಳ ಗೆದ್ದೆ, ಲಲಿತಾ ಪೂಜಾರ್ತಿ, ಶೇಖರ್ ಗಿಳಿಯಾರು, ಜಡ್ಡಾಡಿ ವಿಜಯ್ ಕುಮಾರ್ ಶೆಟ್ಟಿ, ಅರುಣ್ ಶೆಟ್ಟಿ ಪಡುಮನೆ ಮೊದಲಾದವರು ಇದ್ದರು.