ಕುಂದಾಪುರ: ನಾಗರಮಠ, ಹೊಸಾಳದಲ್ಲಿ ಮರಳುಗಾರಿಕೆಗೆ ಆಕ್ಷೇಪ – ಶಾಸಕ ಕೊಡ್ಗಿ ಮಧ್ಯಪ್ರವೇಶ

ಕುಂದಾಪುರ: ಬಾರ್ಕೂರು ಗ್ರಾಮ ಪಂಚಾಯತ್ ಹಾಗೂ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ನಾಗರಮಠ ಹಾಗೂ ಹೊಸಾಳ ಗ್ರಾಮದಲ್ಲಿರುವ ಕಿಂಡಿ ಆಣೆಕಟ್ಟು ಬಳಿ ಸ್ಥಳೀಯರ ಆಕ್ಷೇಪದ ನಡುವೆಯೂ ನಡೆಸಲಾಗುತ್ತಿರುವ ಮರಳುಗಾರಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯರು ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಮನವಿ ಸಲ್ಲಿಸಿದ್ದು, ಘಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದರು.
ಗಣಿ ಇಲಾಖೆ ಅವೈಜ್ಞಾನಿಕವಾಗಿ ಮರಳುಗಾರಿಕೆಗೆ ಸ್ಥಳ ಗುರುತಿಸಿದ್ದು ಕಿಂಡಿ ಅಣೆಕಟ್ಟು ಭಾಗದಲ್ಲಿ ಕೃಷಿ ಭೂಮಿಗೆ ಸಮಸ್ಯೆಯಾಗುತ್ತಿದೆ, ಅಲ್ಲದೆ ಮರಳು ಸಂಗ್ರಹಕ್ಕೆ ಕೃಷಿ ಭೂಮಿಯನ್ನು ಬಳಸಲಾಗುತ್ತಿದೆ ಇಲ್ಲಿನ ರಸ್ತೆಗಳು ಕಿರಿದಾಗಿದ್ದು ಮರಳು ಸಾಗಾಟದ ವಾಹನಗಳಿಂದ ಸ್ಥಳೀಯರಿಗೆ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಶಾಸಕರ ಮುಂದೆ ಸ್ಥಳೀಯ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಶಾಸಕ ಕೊಡ್ಗಿ, ತಕ್ಷಣ ದೂರವಾಣಿಯ ಮೂಲಕ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರ ವಿರೋಧದ ನಡುವೆ ಮರಳುಗಾರಿಕೆ ನಡೆಸದಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿ, ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಮರಳುಗಾರಿಕೆ ನಡೆಸುವ ಸ್ಥಳಗಳ ಗುರುತು ಮಾಡಲು ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಈ ವೇಳೆ ಬಾರ್ಕೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ನಾಗರಮಠ, ವಡ್ಡರ್ಸೆ ಗ್ರಾ.ಪಂ ಸದಸ್ಯ ಕುಶಲ ಶೆಟ್ಟಿ ಹಾಗೂ ಹಲವಾರು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.