ಜಾತಿ ಗಣತಿ ವರದಿಗೆ ಬೀಜಾಡಿ ಅಶೋಕ್ ಪೂಜಾರಿ ವಿರೋಧ – ಬೂತ್ ಮಟ್ಟದ ಅಂಕಿ ಅಂಶ ಸಂಗ್ರಹಿಸುವಂತೆ ಸರ್ಕಾರಕ್ಕೆ ಆಗ್ರಹ

ಕುಂದಾಪುರ: ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ ಜಾತಿಗಣತಿ ಅವೈಜ್ಞಾನಿಕತೆಯಿಂದ ಕೂಡಿದ್ದು, ಪಾರದರ್ಶಕವಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸುವಂತೆ ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಬೀಜಾಡಿ ಅಶೋಕ್ ಪೂಜಾರಿ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಜಾತಿ ಗಣತಿಯ ವರದಿಯು ಇತ್ತೀಚಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿದ್ದು. ಮೇಲ್ನೋಟಕ್ಕೆ ಇದೊಂದು ಅಸಮರ್ಪಕ ವರದಿಯಾಗಿರುವಂತೆ ಕಂಡು ಬಂದಿದೆ. ಮಾಧ್ಯಮದಲ್ಲಿ ಬಿಲ್ಲವ ಈಡಿಗ ಸಮುದಾಯದ ಜನಸಂಖ್ಯೆ ಕೇವಲ 13 ಲಕ್ಷ ಎಂದು ಪ್ರಸಾರವಾಗಿರುತ್ತದೆ. ಈ ವರದಿಯನ್ನು ನಮ್ಮ ಉಪ ಪಂಗಡಗಳು ಸೇರಿದಂತೆ ಬಿಲ್ಲವ ಈಡೀಗ ಸಮುದಾಯವು ಒಮ್ಮತದಿಂದ ಇಂತಹ ಅವೈಜ್ಞಾನಿಕ ವರದಿಯನ್ನು ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಹು ಸಂಖ್ಯೆಯಲ್ಲಿರುವ ಬಿಲ್ಲವ ಈಡಿಗರು ಮತ್ತು ಇತರೆ ಜಿಲ್ಲೆಗಳ ಉಪಪಂಗಡಗಳು ಸೇರಿ ಸರಿಸುಮಾರು 30 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಜನರಿದ್ದಾರೆ. ಹಾಗಾಗಿ ಸರಕಾರ ಇನ್ನೊಮ್ಮೆ ಪ್ರತಿ ಬೂತ್ ಮಟ್ಟ ಅಂಕಿ ಅಂಶಗಳನ್ನು ಕಲೆ ಹಾಕಿ ಸೂಕ್ತ ರೀತಿಯಲ್ಲಿ ಜಾತಿಗಣತಿ ನೆಡೆಸಬೇಕೆಂದು ಆಗ್ರಹಿಸುತ್ತಿದ್ದೇವೆ. ಅಲ್ಲದೆ ಈಗಾಗಲೇ ಕುಂದಾಪುರ ಮತ್ತು ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿರುವ ನಮ್ಮ ಸಮುದಾಯದ ಬೂತ್ ಮಟ್ಟದ ಜಾತಿ ಗಣತಿಯನ್ನು ನಡೆಸಲು ಚಾಲನೆಯನ್ನು ನೀಡಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ವೈಜ್ಞಾನಿಕ ಸಮೀಕ್ಷೆಯು ನಮ್ಮ ಕೈ ಸೇರಲಿದೆ ಇದೇ ಮಾದರಿಯಲ್ಲಿ ಇಡೀ ರಾಜ್ಯದ ಜಾತಿ ಗಣತಿ ನಡೆಸುವಂತೆ ಆಗ್ರಹಿಸಿದ್ದಾರೆ.