ಬಿಜೆಪಿಗೆ ತಾಕತ್ತಿದ್ದರೆ ಮೋದಿ ವಿರುದ್ಧ ಪ್ರತಿಭಟಿಸಲಿ – ಅಜಿತ್ ಶೆಟ್ಟಿ ವಡ್ದರ್ಸೆ ಆಕ್ರೋಶ
ಕುಂದಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳನ್ನು ಸಹಿಸಲಾಗದ ಬಿಜೆಪಿ ಜನರ ದಿಕ್ಕು ತಪ್ಪಿಸಿ, ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಎನ್ನುವ ನಾಟಕ ಮಾಡುತ್ತಿದೆ. ಆದರೆ ಬಿಜೆಪಿ ಮೊದಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ. ಗೋಮಾಂಸ ರಫ್ತು ಮಾಡುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಪ್ರದಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗೋಮಾಂಸ ರಫ್ತು ನಿಷೇಧ ಮತ್ತು ಗೋ ಹತ್ಯ ನಿಷೇಧ ಕಾನೂನನ್ನು ಜಾರಿಗೆ ತರಲಿ ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ವಡ್ಡಸೆ ಆಗ್ರಹಿಸಿದ್ದಾರೆ.

ರೈತರಿಗೆ ನೀಡುವ ಉದ್ದೇಶದಿಂದ ಹಾಲಿನ ಬೆಲೆಯಲ್ಲಿ ನಾಲ್ಕು ರೂಪಾಯಿ ಏರಿಕೆ ಮಾಡಿದ್ದನ್ನೇ ಬೆಲೆ ಏರಿಕೆ ಎಂದು ಬಿಂಬಿಸುವ ಬಿಜೆಪಿ, ಮೊದಲು ಕೇಂದ್ರ ಸರ್ಕಾರ ಜನರ ಮೇಲೆ ಹೇರಿರುವ ಜಿಎಸ್ಟಿಯನ್ನು ಕಡಿಮೆಗೊಳಿಸಲು, ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ನೀಡಲಿ. ಚಿನ್ನದ ಮೇಲಿನ ಜಿಎಸ್ಟಿ ತೆಗೆದುಹಾಕಲು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಅವರು ಆಗ್ರಹಿಸಿದರು.
ಕೇವಲ ಹಿಂದುತ್ವದ ಅಜೆಂಡದ ಮೇಲೆ ಅಧಿಕಾರ ಹಿಡಿದ ಬಿಜೆಪಿ ಇವತ್ತು ನಮ್ಮ ತೆರಿಗೆ ಹಣವನ್ನು ರಾಜ್ಯಕ್ಕೆ ಕೊಡಲು ಹಿಂದೇಟು ಹಾಕುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಕೊಡಬೇಕಾದ ತೆರಿಗೆ ಹಣವನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಲಿ. ಜನರ ದಿಕ್ಕು ತಪ್ಪಿಸಿ ಪ್ರತಿಭಟನೆಯ ನೆಪದಲ್ಲಿ ಕಾಂಗ್ರೆಸ್ಸಿನ ಮೇಲೆ ಗೂಬೆ ಕೂರಿಸುವುದನ್ನು ಬಿಡಲಿ. ಎಲ್ಲ ಅರ್ಹತೆಗಳಿದ್ದರೂ ಕರಾವಳಿಗೆ ಒಂದು ಮೆಡಿಕಲ್ ಕಾಲೇಜು ತರಲು ಕರಾವಳಿಯ ಶಾಸಕರಿಗೆ ಸಾಧ್ಯವಾಗಲಿಲ್ಲ. ಇಂತಹಬ್ಧಾಸಕರಿಂದ ಜನರಿಗೆ ಯಾವ ಪ್ರಯೋಜನವಿದೆ ಎಂದು ಪ್ರಶ್ನಿಸಿದ ಅಜಿತ್, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಉಡುಪಿ ಜಿಲ್ಲೆಯ ಐದು ಬಿಜೆಪಿ ಶಾಸಕರು ಇನ್ನಾದರೂ ಅಭಿವೃದ್ಧಿಯತ್ತ ಗಮನ ಕೊಡಲಿ ಎಂದು ಅಜಿತ್ ಶೆಟ್ಟಿ ಹೇಳಿದರು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಗೆ ರೂಪರೇಷೆಗಳನ್ನು ಸಿದ್ಧಪಡಿಸಿದೆ. ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ 40,000ಕ್ಕೂ ಅಧಿಕ ಕಾರ್ಯಕರ್ತರು ಸೇರಲಿದ್ದಾರೆ ಎಂದು ಅವರು ತಿಳಿಸಿದರು.