ಕುಂದಾಪುರ: ಹುಂಚಾರ್ ಬೆಟ್ಟು ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ
ಯುಜಿಡಿ ಅವ್ಯವಹಾರದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆಯೇ: ಸುರೇಶ್ ಕಲ್ಲಾಗರ ಪ್ರಶ್ನೆ

ಕುಂದಾಪುರ: ಕುಂದಾಪುರ ಪುರಸಭೆಯ ಹುಂಚಾರ್ ಬೆಟ್ಟು ವಾರ್ಡ್ನ ಬೆಟ್ಟಾಗರದ ಜನವಸತಿ ಪ್ರದೇಶದಲ್ಲಿ ಮಾಡಲುದ್ದೇಶಿಸಿರುವ ನಗರದ ಕೊಳಚೆ ತ್ಯಾಜ್ಯ ಶುದ್ಧೀಕರಿಸಿ ವಿಸರ್ಜಿಸಲ್ಪಡುವ ಮುಖ್ಯ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಕೊಳಚೆ ಶುದ್ಧೀಕರಣ ಘಟಕ ಸ್ಥಳಾಂತರ ಹೋರಾಟ ಸಮಿತಿ ನೇತೃತ್ವದಲ್ಲಿ ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿ ಸಹಸಂಚಾಲಕ ಸುರೇಶ್ ಕಲ್ಲಾಗರ, ಅಭಿವೃದ್ಧಿ ವಿರುದ್ಧ ನಮ್ಮ ಹೋರಾಟ ಅಲ್ಲ ನಗರದ ಹಿತದೃಷ್ಟಿಯಿಂದ ಶುದ್ಧೀಕರಣ ಘಟಕದ ಅಗತ್ಯವಿದೆ. ಆದರೆ ಜನರ ಬದುಕು ಬಲಿಕೊಟ್ಟು ಅಭಿವೃದ್ಧಿ ಮಾಡುತ್ತೇವೆ ಎಂಬುವುದು ಮೂರ್ಖತನದ ಪರಮಾವಧಿ ಎಂದರು. ಪುರಸಭೆ ಜನರ ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡಬೇಕೆ ಹೊರತು ಪುರಸಭೆಯೇ ಜನರಿಗೆ ಸಮಸ್ಯೆ ಆಗಬಾರದು. ಉದ್ದೇಶಿತ ಸ್ಥಳದಲ್ಲಿ ನೂರಾರು ಕುಟುಂಬಗಳು ನೂರಾರು ವರ್ಷಗಳಿಂದ ಬದುಕು ಸಾಗಿಸುತ್ತಿದ್ದಾರೆ. ಸ್ಥಳೀಯರ ವಿರೋಧದ ನಡುವೆಯೂ ಮುಖ್ಯ ಘಟಕ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವುದರ ಹಿಂದೆ ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದರು.

ಸಮಿತಿ ಸಂಚಾಲಕ ರವಿ ವಿ ಎಂ ಪ್ರಾಸ್ತಾವಿಸಿ, ಶುದ್ಧೀಕರಣದ ಮುಖ್ಯ ಘಟಕವನ್ನು ಉದ್ಧೇಶಿತ ಸ್ಥಳದಿಂದ 500 ಮೀಟರ್ ಮುಂದಕ್ಕೆ ಸ್ದಳಾಂತರಗೊಳಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಜನರನ್ನು ರಕ್ಷಿಸುವ ಬದಲು ಅಲ್ಲಿಯೇ ಮಾಡುತ್ತೇವೆ ಎಂದು ತೀರ್ಮಾನಿಸಿರುವುದು ಸರಿಯಲ್ಲ. ನಮ್ಮ ಹೋರಾಟ ತೀವ್ರ ಗೊಳ್ಳಲಿದೆ ಎಂದರು. ಸಹಸಂಚಾಲಕ ಮಹೇಂದ್ರ ಪೂಜಾರಿ, ಸ್ಥಳೀಯ ಪುರಸಭಾ ಸದಸ್ಯ ಶೇಖರ ಪೂಜಾರಿ, ಹೋರಾಟ ಸಮಿತಿಯ ಚಂದ್ರಶೇಖರ ವಿ ಮಾತನಾಡಿದರು. ವಿಶ್ವನಾಥ್ ಗರಡಿ, ಪ್ರಕಾಶ್ ಬೆಟ್ಟಾಗರ, ಶೇಖರ ದೋಣಿ ಮನೆ, ಉದಯ ಟೈಲರ್, ಸಂತೋಷ ಡಿ, ಮಂಜುನಾಥ ವಿ ಎಸ್, ಕೃಷ್ಣ ಕೋಣಿ, ಸುರೇಶ್ ಮೂಡುಹಿತ್ಲು, ಗಿರಿಜ, ಯಶೋಧ ಮೊದಲಾದವರು ಸೇರಿದಂತೆ ಗ್ರಾಮಸ್ಥರು ನೂರಾರು ಮಂದಿ ಸ್ಥಳೀಯರು ಮೆರವಣಿಗೆ ಮೂಲಕ ಪುರಸಭೆಗೆ ಆಗಮಿಸಿದರು. ಬಳಿಕ ಪುರಸಭಾ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರಿಗೆ ಮನವಿ ನೀಡಲಾಯಿತು.