ಯಕ್ಷಗಾನ ವಿಶ್ವಮಾನ್ಯವಾಗಲಿ – ವೀರ ಚಂದ್ರಹಾಸ ಸಿನಿಮಾ ಮೂಲಕ ಚಿತ್ರೋದ್ಯಮದಲ್ಲಿ ಹೊಸ ಶಖೆ

ಕುಂದಾಪುರ : ಪರಂಪರೆ, ಸಂಸ್ಕೃತಿ, ಧಾರ್ಮಿಕ ನಂಬಿಕೆಯೊಂದಿಗೆ ಕಲಾ ಶ್ರೀಮಂತಿಕೆಯನ್ನು ಹೊಂದಿರುವ ಗಂಡುಕಲೆ ಯಕ್ಷಗಾನವನ್ನು ಇನ್ನಷ್ಟು ವಿಸ್ತಾತಗೊಳಿಸಿ, ಅದನ್ನು ವಿಶ್ವಗಾನವನ್ನಾಗಿಸಿ, ವಿಶ್ವಮಾನ್ಯವನ್ನಾಗಿಸಬೇಕು ಎನ್ನುವ ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ಪರಿಶ್ರಮ ತಂಡದ ನೇತ್ರತ್ವದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ವೀರಚಂದ್ರಹಾಸ ಸಿನಿಮಾವನ್ನು ಎಪ್ರಿಲ್ 18 ರಂದು ಏಕಕಾಲದಲ್ಲಿ ರಾಜ್ಯದ 60 ಚಿತ್ರ ಮಂದಿರಗಳಲ್ಲಿ ಹಾಗೂ ಹೊರ ರಾಜ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಂಗೀತ ಹಾಗೂ ಚಲನಚಿತ್ರ ನಿರ್ದೇಶಕ ರವಿ ಬಸ್ರೂರು ಹೇಳಿದರು. ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದ ವಠಾರದಲ್ಲಿ ಭಾನುವಾರ ವೀರಚಂದ್ರಹಾಸ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಅವರು ಮಾತನಾಡಿದರು.

ಸಿನೆಮಾದಲ್ಲಿ ಕಲಾವಿದರು ಶುದ್ಧ ಕನ್ನಡವನ್ನು ಬಳಸಿ ಯಕ್ಷಗಾನ ರಂಗಸ್ಥಳದಲ್ಲಿ ಕಲಾವಿದರು ಬಳಕೆ ಮಾಡುವ ಭಾಷೆಯನ್ನೇ ಬಳಕೆ ಮಾಡಲಾಗಿದೆ. ಕೇವಲ ಮನೋರಂಜನೆ ಮಾತ್ರ ಉದ್ದೇಶವನ್ನಾಗಿರಿಸಿಕೊಳ್ಳದೆ ಪಾರಂಪರಿಕ ಕಲೆಯೊಂದನ್ನು ವಿಶ್ವವ್ಯಾಪಿಯನ್ನಾಗಿಸಬೇಕು ಎನ್ನುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಈಗಾಗಲೇ ಸಿನಿಮಾದ ತೆಲುಗು ಅವತರಣಿಕೆಯ ಬಗ್ಗೆ ಬೇಡಿಕೆ ಬಂದಿದ್ದು, ಬೇರೆ ಭಾಷೆಗಳಿಗೂ ಬೇಡಿಕೆ ಬರುವ ಭರವಸೆ ಇದೆ ಎಂದರು.

8-9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿನಿಮಾಕ್ಕೆ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ಸಂದರ್ಭ ಎಲ್ಲ ಪಾರಂಪರಿಕ ಕಟ್ಟುಪಾಡುಗಳನ್ನು ಅತ್ಯಂತ ಗೌರವದಿಂದ ಪಾಲಿಸಲಾಗಿದೆ. 2.35 ನಿಮಿಷಗಳ ಅವಧಿಯ ಈ ಚಿತ್ರದಲ್ಲಿ ಯಕ್ಷಗಾನಕ್ಕೆ ಅಗೌರವವಾಗುವಂತ ಒಂದೇ ಒಂದು ಸನ್ನಿವೇಶಗಳನ್ನು ತಂದಿಲ್ಲ. ಯಕ್ಷಗಾನ ಪರಂಪರೆಯ ಗೌರವ, ವ್ಯಾಪ್ತಿಯನ್ನು ಹೆಚ್ಚಿಸಿ, ಯಕ್ಷ ಕಲಾವಿದರ ಜೀವನ ಭದ್ರತೆಗೆ ಅನುಕೂಲವಾಗಬೇಕು ಎನ್ನುವ ಉದ್ದೆಶಗಳನ್ನು ಇರಿಸಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡುವಂತೆ ಕೇಳಲಾಗಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಈ ಸಿನಿಮಾ ನೋಡುವ ಅವಕಾಶ ಮಾಡಿಕೊಡುವಂತೆ ವಿನಂತಿಸಲಾಗಿದೆ. ಯಕ್ಷಗಾನ ತರಬೇತಿ ಕೇಂದ್ರ, ಅಧ್ಯಯನ ಕೇಂದ್ರ, ಪಠ್ಯ ಸೇರಿದಂತೆ ಯಕ್ಷಗಾನ ಕ್ಷೇತ್ರದ ಕಲಾವಿದರು ಹಾಗೂ ಕ್ಷೇತ್ರದ ಬೆಳೆವಣಿಗೆಗೆ ಪೂರಕವಾಗಿ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಹೊಂಬಾಳೆ ಫಿಲ್ಮ್ ಸಂಸ್ಥೆಯವರು ಚಿತ್ರದ ಒಟ್ಟಾರೆ ನಿರ್ಮಾಣದಲ್ಲಿ ಸ್ಮರಣೀಯ ಸಹಕಾರ ನೀಡಿದ್ದಾರೆ ಎಂದರು. ನಾಯಕ ನಟ ಶಿಥಿಲ್ ಕುಮಾರ ಶೆಟ್ಟಿ, ಅಯೋಜಕರಾದ ನಾಗರಾಜ್ ಶೆಟ್ಟಿ ನೈಕಂಬಳ್ಳಿ, ಕಲಾವಿದರುಗಳಾದ ನವೀನ್ ಶೆಟ್ಟಿ ಐರ್ಬೈಲ್, ಪ್ರಸನ್ನ ಶೆಟ್ಟಿಗಾರ್, ಭಾಗವತ ಪ್ರಸಾದ್ ಕುಮಾರ ಮೊಗೆಬೆಟ್ಟು ಇದ್ದರು.