ಏಪ್ರಿಲ್ 18ಕ್ಕೆ ಯಕ್ಷ ಶೈಲಿಯ ಸಿನೇಮಾ, ವೀರ ಚಂದ್ರಹಾಸ ಬಿಡುಗಡೆ – ಕಲಾವಿದರಿಗೆ ಸನ್ಮಾನ

ಕುಂದಾಪುರ: ಕನ್ನಡ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಯಕ್ಷಗಾನ ಶೈಲಿಯ ವೀರ ಚಂದ್ರಹಾಸ ಸಿನಿಮಾ ಇದರ ಬಿಡುಗಡೆಯು ಏಪ್ರಿಲ್ 18ರಂದು ರಾಜ್ಯದ 60 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಇಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು. ಅವರು ಭಾನುವಾರ ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆವರಣದಲ್ಲಿ ಸಿನೆಮಾದಲ್ಲಿ ದುಡಿದ ಕಲಾವಿದರನ್ನು ಹಾಗೂ ಪ್ರೋತ್ಸಾಹಕರನ್ನು ಸನ್ಮಾನಿಸಿ ಮಾತನಾಡಿದರು.










ಚಿತ್ರದಲ್ಲಿ ವೃತ್ತಿಪರ ಯಕ್ಷಗಾನ ಕಲಾವಿದರೇ ನಾಯಕ, ಖಳ ನಾಯಕ, ಹಾಸ್ಯ ಸೇರಿದಂತೆ ಬಹುತೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುಮಾರು 400 ರಿಂದ 500 ಪಾತ್ರಧಾರಿಗಳು ಅಭಿನಯಿಸಿದ್ದಾರೆ. ಪ್ರಸಿದ್ಧ ಭಾಗವತರಾದ ಪಟ್ಲ, ಜನ್ಸಾಲೆ, ಮೊಗೆಬೆಟ್ಟು, ಚಿನ್ಮಯಿ, ಬಿಲ್ಲಾಡಿ ಮುಂತಾದವರು ಹಿನ್ನೆಲೆ ಗಾಯನದಲ್ಲಿ ರಸದೌತಣ ನೀಡಿದ್ದಾರೆ. ಶಿವಾನಂದ ಕೋಟ, ಸುಜನ, ಸುನೀಲ್ ಭಂಡಾರಿ, ವಿಶ್ರ್ವಂಭರ ಅಲ್ಸೆ, ಕೌಶಿಕ್ ರಾವ್, ಚೈತನ್ಯ ಪದ್ಯಾಣ ಮುಂತಾದವರು ಚಂಡೆ-ಮದ್ದಳೆ ವಾದನ ನೀಡಿದ್ದಾರೆ. ಕಲಾ ನಿರ್ದೇಶಕ ಪ್ರಭಾ ಬಡಗೇರ ಕಲಾ ನಿರ್ದೇಶನ ನೀಡಿದ್ದಾರೆ ಎಂದರು.












ಯಕ್ಷಗಾನದ ಪಂಜು ಹಾಗೂ ದೊಂದಿಗಳನ್ನೆ ಬಳಸಿ ಮೂಲ ಪರಂರೆಯನ್ನು ಉಳಿಸಿಕೊಳ್ಳಲಾಗಿದೆ. 1600 ರಿಂದ 1700 ರಷ್ಟು ಟ್ರ್ಯಾಕ್ ಕೇವಲ ಚಂಡೆ-ಮದ್ದಳೆಗಳ ವಾದನದಲ್ಲಿಯೇ ಅದ್ಭುತವಾಗಿ ಕೇಳಿ ಬಂದಿದೆ. ಸಂಗೀತ ಪ್ರಿಯರ ಊಹೆಗೂ ನಿಲುಕದ ಚಂಡೆ ಹಾಗೂ ಮದ್ದಳೆಯ ನಿನಾದ ಸಿನಿಮಾ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ. ಚಿತ್ರ ನಟ ಡಾ. ಶಿವರಾಜ್ ಕುಮಾರ್ ಶಿವಪುಟ್ಠಸ್ವಾಮಿ ಎನ್ನುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ, ಗರುಡ ರಾಮ್, ಪುನೀತ್ ರುದ್ರನಾಗ್ ಹಾಗೂ ಪ್ರಣವ್ ಸೂರ್ಯ ಅಭಿನಯಿಸಿದ್ದಾರೆ ಎಂದರು.