ಶಂಕರನಾರಾಯಣ: ಮದುವೆಗೆ ನಿರಾಕರಿಸಿದ ಪ್ರೇಮಿ – ರಾಟಾಲ್ ತಿಂದ ಯುವತಿ ಅಸ್ವಸ್ಥ
ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ ಕೈಕೊಟ್ಟ ವಿಚಾರಕ್ಕೆ ಸಂಬಂಧಿಸಿ ಯುವತಿಯೊಬ್ಬಳು ಇಲಿಗೆ ಹಾಕುವ ರಾಟಾಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿದ್ಧಾಪುರದಲ್ಲಿ ನಡೆದಿದೆ. ಪಾರಿಶಿಷ್ಟ ಜಾತಿಗೆ ಸೇರಿದ ಅನುಷಾ ಗಂಭೀರಗೊಂಡವರು.

ಅನುಷಾ ಸಿದ್ದಾಪುರದ ಗಿರಿಜ ಸಿಲ್ಕ್ ನಲ್ಲಿ 2 ವರ್ಷಗಳಿಂದ ಕೆಲಸಮಾಡಿಕೊಂಡಿದ್ದಳು. ಆಕೆಯ ಅಣ್ಣ ಅರುಣ್ ಅವರ ಪಿಕಪ್ ವಾಹನದ ಚಾಲಕ ಹಳ್ಳಿಹೊಳೆ ನಿವಾಸಿ ಭರತ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದಾತ ಎಂದು ಆರೋಪಿಸಲಾಗಿದೆ. ಭರತ್ ಆರು ತಿಂಗಳ ಹಿಂದೆ ಚಾಲಕನಾಗಿ ಕೆಲಸಕ್ಕೆ ಬಂದಿದ್ದು ಅರುಣ್ ಅವರ ಮನೆಗೆ ಹೋಗಿ ವಾಹನವನ್ನು ತೆಗೆದುಕೊಂಡು ಬಾಡಿಗೆಗೆ ಹೋಗುತ್ತಿದ್ದ. ಸುಮಾರು 2 ತಿಂಗಳುಗಳಿಂದ ಅರುಣನ ತಂಗಿ ಅನುಷಾಳನ್ನು ಪ್ರೀತಿ ಮಾಡುತ್ತಿದ್ದು, ಮನೆಯವರಿಗೆ ವಿಷಯ ಗೊತ್ತಾಗಿದೆ. ಆರೋಪಿ ಭರತ ಕೆಲವೊಮ್ಮೆ ಅನುಷಾಳನ್ನು ಸಿದ್ದಾಪುರದಿಂದ ಆತನ ಬೈಕ್ ನಲ್ಲಿ ತಾರೆಕೊಡ್ಲು ಬಸ್ ನಿಲ್ದಾಣಕ್ಕೆ ತಂದು ಬಿಟ್ಟು ಹೋಗುತ್ತಿದ್ದನು, ಈ ಬಗ್ಗೆ ಮನೆಯವರು ಅನುಷಾಳಲ್ಲಿ ಕೇಳಿದಾಗ ಭರತ್ ತನ್ನನ್ನು ಮದುವೆ ಆಗುತ್ತೇನೆ ಎಂಬುದಾಗಿ ತಿಳಿಸಿದ್ದಾನೆ ಎಂದು ಹೇಳಿದ್ದಳು.
ಭರತನಲ್ಲಿ ವಿಚಾರಿಸಿದಾಗ ಮದುವೆಗೆ ನಿರಾಕರಿಸಿದ್ದಾನೆ ಎನ್ನಲಾಗಿದೆ. ಬಳಿಕ ತಾರೆಕೊಡ್ಲು ಬಸ್ ನಿಲ್ದಾಂದ ಬಳಿ ಬಿಟ್ಟು ಹೋಗಿದ್ದಾನೆ. ಇದರಿಂದ ನೊಂದ ಅನುಷಾ ಜೂನ್ 11ರಂದು ಇಲಿಗೆ ಹಾಕುವ ವಿಷದ ಟ್ಯೂಬ್ ಸೇವಿಸಿರುತ್ತೇನೆ ಎಂಬುದಾಗಿ ತಿಳಿಸಿದ್ದು, ಮನೆಯವರು ಕೂಡಲೇ ಅವರ ಕಾರಿನಲ್ಲಿ ಕುಂದಾಪುರ ಸರ್ಕರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಅಲ್ಲಿನ ವೈದ್ಯಾಧಿಕಾರಿಯವರು ಚಿಕಿತ್ಸೆ ನೀಡಿ ಐಸಿಯು ಘಟಕದಲ್ಲಿ ಇರಿಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.