ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಯಕ್ಷಗಾನ ಮದ್ದಳೆಗಾರ ದುರ್ಮರಣ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರಾಟೆ ಸೇತುವೆ ಬಳಿ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ನಾರಾಯಣ ಪೂಜಾರಿ (40) ಸಾವನ್ನಪ್ಪಿದ್ದಾರೆ.
ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದ ಪ್ರಧಾನ ಮದ್ದಳೆಗಾರರಾಗಿದ್ದ ನಾರಾಯಣ ಪೂಜಾರಿ ಶಿರೂರಿನಿಂದ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಶಿರೂರಿನ ತೂದಳ್ಳಿಯಲ್ಲಿ ನಡೆಯಬೇಕಿದ್ದ ಹಟ್ಟಿಯಂಗಡಿ ಮೇಳದ ಆಟ ಭಾರೀ ಮಳೆಯಿಂದಾಗಿ ಯಕ್ಷಗಾನ ಪ್ರದರ್ಶನ ರದ್ದಾಗಿತ್ತು. ಹಾಗಾಗಿ ಅವರು ತಮ್ಮ ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು.
ಶನಿವಾರ ಸಂಜೆ ಭಾರಿ ಮಳೆ ಸುರಿದ ಕಾರಣ ದ್ವಿಚಕ್ರ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಅಲ್ಲದೆ ಅರಾಟೆ ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಏಕಮುಖ ಸಂಚಾರ ವ್ಯವಸ್ಥೆಯನ್ನು ಬದಲಿಸಿ ರಸ್ತೆಗೆ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಗೊಂದಲಕ್ಕೆ ಒಳಗಾದ ನಾರಾಯಣ ಪೂಜಾರಿ ಅವರು ಬದಲಾದ ಸಂಚಾರ ವ್ಯವಸ್ಥೆಯ ಅರಿವಿಲ್ಲದ ತಡೆಗೋಡೆಯಾಗಿ ಇರಿಸಲಾಗಿದ್ದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಂದಾಪುರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದೀಗ ಅರಾಟೆ ಸೇತುವೆಯ ಎರಡು ಬದಿಗಳಲ್ಲಿ ಅಪಘಾತ ವಲಯ ಸೃಷ್ಟಿಯಾಗಿದ್ದು ಈಗಾಗಲೇ ನಾಲ್ಕೈದು ಅಪಘಾತಗಳು ಈ ಸ್ಥಳದಲ್ಲಿ ನಡೆದಿದೆ. ಸಂಚಾರ ನರಕ ಸದೃಶವಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ನಿರ್ವಹಣಾ ಸಂಸ್ಥೆಗಳು ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾಗಿ ಅರಾಟೆ ಸೇತುವೆ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಮುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Sad news .. sad to see many yaksgagana artists die in accidents.. They shoupd have faviliyies of pick anf drop like corporates have..