ಕುಂದಾಪುರ: ತಾಲೂಕು ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಉದಯ ಮಡಿವಾಳ ಎಂ.

ಕುಂದಾಪುರ: ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕುಂದಾಪುರ ತಾಲೂಕು ಗ್ರೇಡ್ 1 ಸರ್ಕಾರೀ ದೈಹಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ದೈಹಿಕ ಶಿಕ್ಷಣ ಶಿಕ್ಷಕ ಉದಯ ಮಡಿವಾಳ ಎಂ. ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸರಕಾರಿ ಪ್ರೌಢಶಾಲೆ ವಕ್ವಾಡಿಯ ಕುಸುಮಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ಸರಕಾರಿ ಪ್ರೌಢಶಾಲೆ ಹೆಸ್ಕುತೂರಿನ ಜಯಪ್ರಸಾದ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಸರ್ಕಾರಿ ಪ್ರೌಢಶಾಲೆ ಬಸ್ರೂರಿನ ಸುಧಾಕರ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆಯ ರೇಷ್ಮಾ, ಖಜಾಂಚಿಯಾಗಿ ಸರಕಾರಿ ಪ್ರೌಢಶಾಲೆ ಬೀಜಾಡಿಯ ಉದಯ್ ಮೊಗವೀರ, ಆಯ್ಕೆಯಾಗಿದ್ದಾರೆ.
ಈ ಆಯ್ಕೆ ಪ್ರಕ್ರಿಯೆಯು ಬೆಂಗಳೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಕೇಂದ್ರ ಚುನಾವಣಾಧಿಕಾರಿಗಳ ಚುನಾವಣಾ ಅಧಿಸೂಚನೆಯಂತೆ ನಡೆದಿದ್ದು, ಕರ್ನಾಟಕ ರಾಜ್ಯ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ(ರಿ) ಬೆಂಗಳೂರು ಇದರ ಬೈಲಾ ನಿಯಮಾವಳಿಯಂತೆ ಕುಂದಾಪುರ ಬೈಂದೂರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.