ಬಿಜೂರು: ಭಗವಂತನಿಗಿಂತ ಯಾರೂ ದೊಡ್ಡವರಿಲ್ಲ – ಉದ್ಯಮಿ ಚಿಕ್ಕಮಂಗಳೂರು ಕಿಶೋರ್ ಕುಮಾರ್ ಹೆಗ್ಡೆ

ಕುಂದಾಪುರ: ಭಗವಂತನಿಗಿಂತ ಯಾರೂ ದೊಡ್ಡವರಿಲ್ಲ. ಎಲ್ಲ ಜೀವಿಗಳು ಸಮಾನವಾಗಿದ್ದು ಅವರವರ ಭಕ್ತಿ ಶ್ರದ್ಧೆ ಧರ್ಮ ನಿಷ್ಠೆಯಂತೆ ಅನುಗ್ರಹಗಳು ಪ್ರಾಪ್ತಿಯಾಗುತ್ತವೆ. ದೈವ ಸಂಕಲ್ಪ ಇದ್ದಾಗ ಮಾತ್ರ ಭಗವಂತನ ಸೇವೆ ಮಾಡಲು ಸಾಧ್ಯವಾಗುತ್ತದೆ. ದೇವರ ಇಚ್ಛೆಯಂತೆ ದೈವತಾ ಕಾರ್ಯವು ನಡೆಯುತ್ತದೆ ಎಂದು ಉದ್ಯಮಿ ಚಿಕ್ಕಮಂಗಳೂರು ಕಿಶೋರ್ ಕುಮಾರ್ ಹೆಗ್ಡೆ ಹೇಳಿದರು. ಅವರು ಬಿಜೂರು ಮಕ್ಕಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲ ಲೋಕಾರ್ಪಣೆ, ಶಿಖರ ಕಲಶ ಪ್ರತಿಷ್ಠ ಬ್ರಹ್ಮಕಲಶೋತ್ಸವ, ಕೋಟಿ ಶಿವ ಪಂಚಾಕ್ಷರಿ ಜಪ-ಯಜ್ಞ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಶಾಸಕ ಗುರುರಾಜ್ ಗಂಟಿಹೊಳೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವತಾ ಕಾರ್ಯದಲ್ಲಿ ನಿಸ್ವಾರ್ಥದಿಂದ ತೊಡಗಿಸಿಕೊಂಡಾಗ ಯಶಸ್ಸು ಸಾಧ್ಯವಾಗುತ್ತದೆ. ಊರಿನ ದೇವಸ್ಥಾನ ಅಭಿವೃದ್ಧಿಗೊಂಡಂತೆ ಗ್ರಾಮದ ಸಮೃದ್ಧಿಗೆ ಕಾರಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಘುರಾಮ್ ಶೆಟ್ಟಿ ಬಿಜೂರು, ಗೋಕುಲ್ ಜಿ. ಶೆಟ್ಟಿ ಉಪ್ಪುಂದ, ರಾಧಕೃ ಬವಳಾಡಿ, ಬಿಜೂರು ಗ್ರಾ.ಪಂ. ಉಪಾಧ್ಯಕ್ಷ ರಂಜಿತ್ ಪೂಜಾರಿ, ಸದಸ್ಯ ರಾಘವೇಂದ್ರ ಗಾಣಿಗ, ವೆಂಕಟೇಶ್ ರಾವ್ ಹೊಸ್ಕೊಟೆ, ಶೇಖರ್ ಶೆಟ್ಟಿ ಬವಳಾಡಿ, ವಿನಾಯಕ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಬೆಳಿಗ್ಗೆ ಬೊಗಸೆ ನಾಣ್ಯ ಸಮರ್ಪಣೆ, ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು. ಷಣ್ ನಾರಿಕೇಳ ಗಣಹೋಮ, ಮಹಾ ಮೃತ್ಯುಂಜಯ ಹವನ ಹಾಗೂ ಏಕಾದಶ ರುದ್ರಾಭಿಷೇಕ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಶಾಸಕ ಗುರುರಾಜ್ ಗಂಟಿಹೊಳೆ ಬ್ರಹ್ಮಕಲಶೋತ್ಸವದ ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿದರು. ಬಾಲಚಂದ್ರ ಭಟ್ ಸ್ವಾಗತಿಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೂಕ್ತೇಸರ ಗುರುರಾಜ್ ಭಟ್ ಪ್ರಸ್ತಾವಿಸಿದರು. ರಾಘವೇಂದ್ರ ಆಚಾರ್ಯ ಕಟ್ಟಿನಮಕ್ಕಿ ನಿರೂಪಿಸಿದರು.
