ಕುಂದಾಪುರ: ಜಮೀಯತುಲ್ ಫಲಾಹ್ ವತಿಯಿಂದ ರೂ.1.20 ಲಕ್ಷ ಮೌಲ್ಯದ ಕಲಿಕಾ ಪ್ರೋತ್ಸಾಹ ಧನ ವಿತರಣೆ


ಕುಂದಾಪುರ: ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವೊಂದು ವಿದ್ಯಾಮಾನಗಳಿಂದಾಗಿ ಮಕ್ಕಳು ದುಶ್ಚಟಗಳ ದಾಸರಾಗಿ, ಮಾದಕ ವಸ್ತುಗಳ ವ್ಯಸನಿಗಳಾಗಿ ದಾರಿ ತಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಜಮೀಯತುಲ್ ಫಲಾಹ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್ ಹೇಳಿದರು.


ಅವರು ಕುಂದಾಪುರದ ಜಾಮಿಯಾ ಮಸೀದಿಯ ಹಾಲ್ ನಲ್ಲಿ ನಡೆದ ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರೇರಣಾ ಶಿಬಿರದ ಅಧ್ಯಕ್ಷತೆವಹಿಸಿ 40 ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಮೌಲ್ಯದ ಕಲಿಕಾ ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದರು. ಮೌಲಾನಾ ಫಝಲ್ ಮೊಹಮ್ಮದ್ ಉದ್ಘಾಟಿಸಿದರು.


ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಸಿ ಸಂಸ್ಥೆಯು ನಡೆದು ಬಂದ ದಾರಿ ಹಾಗೂ ಇಂದಿನ ವಿದ್ಯಾರ್ಥಿಗಳಿಗೆ ಇರಬೇಕಾದ ಸಾಮಾಜಿಕ ಬದ್ಧತೆಯ ಕುರಿತು ಮಾತನಾಡಿದರು. ಕುಂದಾಪುರ ಜಾಮಿಯಾ ಮಸೀದಿ ಅಧ್ಯಕ್ಷ ವಸೀಮ್ ಬಾಷಾ ಸಾಹೇಬ್, ಮಾಜಿ ಅಧ್ಯಕ್ಷ, ಸಮಾಜ ಸೇವಕ ಮೊಹಮ್ಮದ್ ನಾಸೀರ್, ಕೋಶಾಧಿಕಾರಿ ಶೇಖ್ ಅಬು ಮೊಹಮ್ಮದ್, ತಾಲೂಕು ಘಟಕದ ಉಪಾಧ್ಯಕ್ಷರುಗಳಾದ ಜಿ. ಪಿ ಮೊಹಮ್ಮದ್, ಅಬ್ದುಲ್ ಹಮೀದ್ ಗಂಗೊಳ್ಳಿ ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಘಟಕದ ಕಾರ್ಯದರ್ಶಿ ಮುಜಾವರ್ ಅಬು ಮೊಹಮ್ಮದ್ ಸ್ವಾಗತಿಸಿ ವಂದಿಸಿದರು. ರಿಯಾಜ್ ಕೋಡಿ ನಿರೂಪಿಸಿದರು. ತಾಲೂಕು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.