ಬೈಂದೂರಿನಿಂದ ಕುಂಭ ಮೇಳಕ್ಕೆ ಹೋದ ವ್ಯಕ್ತಿ ನಾಪತ್ತೆ – ಮನೆಯಲ್ಲಿ ಆತಂಕ!
ಕುಂದಾಪುರ: ಕುಂಭಮೇಳ ದರ್ಶನಕ್ಕೆಂದು ಹೋಗಿದ್ದ ಉಡುಪಿ ಜಿಲ್ಲೆಯ ಬೈಂದೂರು ಮೂಲದ 30 ಜನರಲ್ಲಿ ಓರ್ವ ವ್ಯಕ್ತಿ ಶನಿವಾರ ಬೆಳಿಗ್ಗೆ ನಾಪತ್ತೆಯಾಗಿದ್ದು, ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಶ್ರೀಧರ ಮೊಗೇರ (50) ನಾಪತ್ತೆ ಆಗಿರುವ ವ್ಯಕ್ತಿಯಾಗಿದ್ದು, ಬೈಂದೂರು ತಾಲ್ಲೂಕಿನ ಶಿರೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಅಳವೆಗದ್ದೆ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.

ಈ ಕುರಿತು ನಾಪತ್ತೆಯಾಗಿರುವ ಶ್ರೀಧರ ಮೊಗೇರ ಅವರ ಸ್ನೇಹಿತರೊಬ್ಬರು ಮಾತನಾಡಿ, 30 ಜನ ಸ್ನೇಹಿತರು ಸೇರಿಕೊಂಡು ಕುಂಭಮೇಳ ಪ್ರವಾಸಕ್ಕೆ ಹೋಗಿದ್ದರು. ಅದರಲ್ಲಿ ಶ್ರೀಧರ ಎಂಬುವವರು ಶನಿವಾರ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ವಾಹನದ ಚಾಲಕನ ಹತ್ತಿರ ಮೂತ್ರ ವಿಸರ್ಜನೆ ಮಾಡಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಬಂದಿಲ್ಲ. ಕರೆ ಮಾಡಿದರೆ ಒಮ್ಮೊಮ್ಮೆ ಪೋನ್ ಸ್ವಿಚ್ ಆಪ್ ಬರುತ್ತಿದೆ ಮತ್ತು ರಿಂಗ್ ಆಗುತ್ತಿದ್ದರೂ ಕರೆ ಸ್ವೀಕರಿಸುತ್ತಿಲ್ಲ ಎಂದರು.

ಈ ಕುರಿತು ಸದ್ಯ ಪ್ರಯಾಗರಾಜದಲ್ಲಿ ಸ್ನೇಹಿತನ ಹುಡುಕಾಟದಲ್ಲಿರುವ ಗೋಕುಲ ಎಂಬುವರು ಮಾತನಾಡಿ, ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇವೆ. ನಾವೂ ಹುಡುಕಾಡುತ್ತಿದ್ದೇವೆ. ಕುಂಭಮೇಳದಲ್ಲಿ ಬಹಳ ಗದ್ದಲವಿರುವ ಕಾರಣ ಹುಡುಕಲು ಕಷ್ಟವಾಗುತ್ತಿದೆ ಎಂದರು.