ದೇವರ ಹುಂಡಿ ಕಳವು
ಕುಂದಾಪುರ: ಕರಾವಳಿಯಲ್ಲಿ ಕಳವು ಪ್ರಕರಣ ಹೆಚ್ಚಾಗುತ್ತಿದ್ದಂತೆ ಬ್ರಹ್ಮಾವರದ ಹೊಸಾಳ ಗ್ರಾಮದ ಚೌಳಿಕೆರೆ ಶ್ರೀ ಭೈರವ ಗಣಪತಿ ದೇವಸ್ಥಾನದ ಒಳಗಿನ ದೇವರ ಹುಂಡಿಯನ್ನು ಕಳ್ಳರು ಕಳವುಗೈದಿದ್ದಾರೆ.

ಬುಧವಾರ ಸಂಜೆ 7.30ರ ಬಳಿಕ ದೇವಸ್ಥಾನ ಮುಚ್ಚಲಾಗಿದ್ದು, ಗುರುವಾರ ಬೆಳಿಗ್ಗೆ 5.30ಕ್ಕೆ ದೇವಸ್ಥಾನದ ಅರ್ಚಕ ಎಮ್.ಕೆ ವೆಂಕಟೇಶ್ ಬಂದು ನೋಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ರಾತ್ರಿ ಬಾಗಿಲು ಹಾಕಿದ್ದ ಸಂದರ್ಭದಲ್ಲಿ ಒಳನುಗ್ಗಿದ ಕಳ್ಳರು ದೇವಸ್ಥಾನದ ಎಡಬದಿಯ ಪೌಳಿಯನ್ನು ಹತ್ತಿ ದೇವಸ್ಥಾನದ ಒಳಗೆ ಪ್ರವೇಶಿಸಿ, ದೇವರ ಎದುರಿಗೆ ಇರುವ ತೀರ್ಥ ಮಂಟಪದಲ್ಲಿ ಇರಿಸಿದ್ದ ದೇವರ ಕಾಣಿಕೆ ಹುಂಡಿಯನ್ನು ಕಳವುಗೈದಿದ್ದಾರೆ. ಬಳಿಕ ಹುಂಡಿಯನ್ನು ಕೊಂಡೊಯ್ದು, ಅದರಲ್ಲಿದ್ದ ಅಂದಾಜು ರೂ. 10 ರಿಂದ 15 ಸಾವಿರ ಹಣವನ್ನು ಕಳವು ಮಾಡಿ ಕಾಣಿಕೆ ಡಬ್ಬವನ್ನು ದೇವಸ್ಥಾನದ ಹಿಂಬದಿ ಬಿಸಾಡಿ ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.