ಕುಂದಾಪುರ: ವಿಶ್ವವಿನಾಯಕ ಶಾಲೆಯಲ್ಲಿ ಫೆಬ್ರುವರಿ 25ರಂದು ಸ್ಪೇಸ್ ಆನ್ ವ್ಹೀಲ್ಸ್ ವಿಜ್ಞಾನ ವಸ್ತುಪ್ರದರ್ಶನ
ಕುಂದಾಪುರ: ಇಲ್ಲಿಗೆ ಸಮೀಪದ ತೆಕ್ಕಟ್ಟೆ ವಿಶ್ವವಿನಾಯಕ ಸಿ. ಬಿ. ಎಸ್. ಇ. ಶಾಲೆಯಲ್ಲಿ ಫೆಬ್ರುವರಿ 25 ಹಾಗೂ 26ರಂದು ಇಸ್ರೋ ಬೆಂಗಳೂರು ಪ್ರಾಯೋಜಿತ ಸ್ಪೇಸ್ ಆನ್ ವ್ಹೀಲ್ಸ್ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ವಿಶ್ವವಿನಾಯಕ ಸಂಸ್ಥೆಯ ಆಡಳಿತ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಪ್ರಭಾಕರ ಶೆಟ್ಟಿ ಹೇಳಿದರು. ಶುಕ್ರವಾರ ಕುಂದಾಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದರು.

ಇಸ್ರೋ ಸಂಸ್ಥೆಯ ವಿಜುವಲ್ ಡಾಕ್ಯೂಮೆಂಟೇಶನ್ ಮತ್ತು ಔಟ್ ರೀಚ್ ಘಟಕದ ಮುಖ್ಯಸ್ಥ ಪಿ.ವಿ.ಎನ್. ಮೂರ್ತಿಯವರ ನೇತೃತ್ವದಲ್ಲಿ ಆಕಾಶಕಾಯಗಳ ಮಾಹಿತಿಯನ್ನೊಳಗೊಂಡ ಮಾದರಿಗಳ ಎರಡು ಬಸ್ಸುಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿ ಇಡಲಾಗುತ್ತದೆ. ಈ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳ ಮಾಹಿತಿಯೊಂದಿಗೆ, ಇಸ್ರೋ ಸಂಸ್ಥೆಯ ಕಾರ್ಯ ವೈಖರಿ ಹಾಗೂ ಉದ್ಯೋ ಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬಹಳ ಮಾರ್ಗದರ್ಶಿಯಾಗಲಿದೆ ಎಂದು ಅವರು ಹೇಳಿದರು.
ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕುಗಳ 6 ನೇ ತರಗತಿಯಿಂದ 9ನೇ ತರಗತಿಯವರೆಗಿನ ಮಕ್ಕಳಿಗೆ ವೀಕ್ಷಣೆಗೆ ಮುಕ್ತ ಅವಕಾಶಕ್ಕಾಗಿ ಮಾನ್ಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರವಾನಿಗೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಲಘು ಉಪಹಾರ ಹಾಗೂ ವೈದ್ಯಕೀಯ ಸೇವೆಯ ಸೌಲಭ್ಯವನ್ನು ಒದಗಿಸಲಾಗುತ್ತದೆ. ಸ್ಥಳೀಯ ಸರಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಕರೆತರಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು.

ಫೆಬ್ರವರಿ 25ರಂದು ಬೆಳಿಗ್ಗೆ 9:30ಕ್ಕೆ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಸಾರ್ವಜನಿಕರಿಗೂ ವೀಕ್ಷಣೆಗೆ ಮುಕ್ತವಾಗಿರಲಿದೆ. ಫೆಬ್ರವರಿ 25 ರಂದು ಬೆಳಿಗ್ಗೆ 9:30 ರಿಂದ ಸಂಜೆ 4:00 ಗಂಟೆಯವರೆಗೆ ಹಾಗೂ ಫೆಬ್ರವರಿ 26 ರಂದು ಬೆಳಿಗ್ಗೆ 9:30 ರಿಂದ 12 ಗಂಟೆಯವರೆಗೆ ಈ ವಿಜ್ಞಾನ ವಸ್ತು ಪ್ರದರ್ಶನವು ನಡೆಯಲಿರುತ್ತದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಡಳಿತ ಮಂಡಳಿ ವಿನಂತಿಸಿದೆ.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಇಸ್ರೋ ಸಂಸ್ಥೆಯ ಮುಖ್ಯಸ್ಥ ಪಿ. ವಿ. ಎನ್. ಮೂರ್ತಿ, ದುರ್ಗಾ ಪರಮೇಶ್ವರಿ ಎಜುಕೇಶನಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷ ಡಾ. ಜಯರಾಮ್ ಶೆಟ್ಟಿ ಎಸ್., ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೋಬನಾ ಶೆಟ್ಟಿ ಯವರು ಉಪಸ್ಥಿತರಿರುತ್ತಾರೆ ಎಂದರು. ಈ ಸಂದರ್ಭ ಶಾಲೆಯ ಪ್ರಾಂಶುಪಾಲ ನಿತಿನ್ ಅಲ್ಮೇಡಾ ಉಪಸ್ಥಿತರಿದ್ದರು.