ಕುಂದಾಪುರ: ಜೆ ಇ ಇ ಪರೀಕ್ಷೆಯಲ್ಲಿ ಸುಣ್ಣಾರಿಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಪ್ರಥಮ – ಎಂ.ಮಹೇಶ್ ಹೆಗ್ಡೆ ಸುದ್ದಿಗೋಷ್ಠಿ
ಕುಂದಾಪುರ: ಕುಂದಾಪುರ 12 ವರ್ಷಗಳ ಹಿಂದೆ ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಎಕ್ಸಲೆಂಟ್ ವಿದ್ಯಾಸಂಸ್ಥೆ ಸುಣ್ಣಾರಿ, ಇಂದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹಾಗೂ ಸಾಧನೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿ ಬೆಳೆಯುತ್ತಿದೆ ಎಂದು ಎಕ್ಸಲೆಂಟ್ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಹೇಳಿದರು. ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಜೆಇಇ ಮೈನ್ 2025ರ ಫಲಿತಾಂಶದಲ್ಲಿ ಉಡುಪಿ, ಕುಂದಾಪುರ, ಬೈಂದೂರು ತಾಲ್ಲೂಕಿಗೆ ಎಕ್ಸಲೆಂಟ್ ಕಾಲೇಜು ಪ್ರಥಮ ಸ್ಥಾನಿಯಾಗಿದೆ. ಈ ವರ್ಷ ಅನನ್ಯ ಯು ಶೆಟ್ಟಿ 97.69 % ತೆಗೆದು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ವಿಷಯವಾರು ಫಲಿತಾಂಶದಲ್ಲಿ ಪ್ರಸ್ತುತಿ ಶೆಟ್ಟಿ 99.51% ಪಡೆದಿದ್ದಾರೆ. ಈ ವರ್ಷ 90ರಿಂದ 99.51% ವರೆಗೆ 21 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ ಎಂದರು. ವಿದ್ಯಾರ್ಥಿಗಳ ಸಾಧನೆಗೆ ಹಗಲಿರುಳು ಶ್ರಮಿಸಿದ, ಉಪನ್ಯಾಸಕ ಬಳಗದವರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಎಕ್ಸಲೆಂಟ್ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆಗಳು, ಗ್ರಾಮೀಣ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಕಾರಣವಾದ ಹಿನ್ನಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ತೋರಿಸಿದ ಕಾಳಜಿ ಹಾಗೂ ಶಿಕ್ಷಣದ ಮೇಲೆ ಇಟ್ಟಿರುವ ಗುರುತರವಾದ ಈ ಜವಾಬ್ದಾರಿಯನ್ನು ಗುರುತಿಸಿ “ಸುವರ್ಣ ಕನ್ನಡಿಗ 2025” ಪ್ರಶಸ್ತಿಗೆ ಭಾಜನವಾಗಿದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಎಲ್ಕೆಜಿಯಿಂದ ಪ್ರೌಢ ಶಿಕ್ಷಣದ ವರೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹೇಳಿದರು. ಈಗಾಗಲೇ ಪೂರ್ವ ಪ್ರಾಥಮಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಇಲಾಖೆಗಳ ಅನುಮತಿಗಳನ್ನು ಪಡೆಯಲಾಗಿದೆ ಪೂರಕವಾದ ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು ಮುಂದಿನ ವರ್ಷದಿಂದ ಎಲ್ಲಾ ಶೈಕ್ಷಣಿಕ ತರಗತಿಗಳು ಆರಂಭವಾಗಲಿದೆ ಎಂದರು.