ಮೂಲಭೂತ ಸಮಸ್ಯೆಗಳಿಗೆ ಹಿರಿಯರಿಗೆ ಧ್ವನಿಯಾದ ಮಕ್ಕಳು – ಆಲೂರು ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳ ಒತ್ತಾಯ
ಕುಂದಾಪುರ: ಮಕ್ಕಳೂ ಇಂದೇ ಪ್ರಜೆಗಳು ಎನ್ನುವುದನ್ನು ಆಲೂರು ಮಕ್ಕಳು ಸಾಬೀತು ಮಾಡಿದ್ದಾರೆ. ಆ ಮೂಲಕ ಗ್ರಾಮದ ಸಮಸ್ಯೆಗೆ ಮಕ್ಕಳು ಧ್ವನಿಯಾಗಿದ್ದಾರೆ. ಬುಧವಾರ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗ್ರಾಮಸಭೆಯಲ್ಲಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರ ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು. ಏಕಪೋಷಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು. ಗ್ರಾಮಕ್ಕೆ ಸರ್ಕಾರಿ ಬಸ್ ಒದಗಿಸಬೇಕಿದ್ದು, ವಿದ್ಯಾರ್ಥಿಗಳಿಗೆ ಆಗತ್ಯ ಸೌಕರ್ಯ ನೀಡಬೇಕು. ಆಧಾರ್ ನವೀಕರಣಕ್ಕೆ ಕುಂದಾಪುರಕ್ಕೆ ತೆರಳಬೇಕಿದ್ದು, ಗ್ರಾಮಗಳಲೇ ಅವಕಾಶ ಕಲ್ಪಿಸಬೇಕು. ಜನನ ಪ್ರಮಾಣಪತ್ರದಲ್ಲಿ ಖಡ್ಡಾಯಗೊಳಿಸಲಾಗಿರುವ ಇನಿಶಿಯಲ್ ಸೇರ್ಪಡೆಗೊಳಿಸಲು ಪಂಚಾಯಿತಿ ಮಟ್ಟದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕಿದ್ದು, ಶಾಲಾವರಣದ ಸಮೀಪವಿರುವ ಮುಖ್ಯರಸ್ತೆಯಲ್ಲಿ ಹಂಪ್ಸ್ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಜಾತಿ ಆದಾಯ ಪ್ರಮಾಣಪತ್ರ ಅರ್ಜಿ ಸಲ್ಲಿಸುವ ಸಂದರ್ಭ ತಂದೆಯ ಶೈಕ್ಷಣಿಕ ಅರ್ಹತೆ ಕುರಿತು ಶಾಲಾ ದೃಢೀಕರಣ ಪತ್ರ ಕಡ್ಡಾಯಗೊಳಿಸಲಾಗಿದ್ದು, ಗ್ರಾಮೀಣ ಭಾಗಗಳ ಪಾಲಕರು ಅನಕ್ಷರಸ್ಥರಾಗಿರುವುದರಿಂದ ದೃಢೀಕರಣ ಪ್ರಮಾಣಪತ್ರ ಪಡೆಯುವುದು ಅಸಾಧ್ಯವಾಗುತ್ತಿದೆ ಎಂದರು. ಶಾಲಾ ಕಟ್ಟಡದ ಮೇಲ್ಪಾವಣೆ ದುರಸ್ತಿ, ಅವರಣಗೋಡೆ ರಚನೆ, ಕಾಲುಸಂಕ ನಿರ್ಮಾಣ, ಬೀದಿನಾಯಿಗಳ ಸಮಸ್ಯೆ, ರಸ್ತೆ ದುರಸ್ತಿ, ಬೀದಿದೀಪಗಳ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರಕ್ಕೆ ಆಗ್ರಹಿಸಿದರು.
ಇದೇ ಸಂದರ್ಭ ಆರೋಗ್ಯ ಇಲಾಖೆ ಸಿಚ್, ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್, ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು. ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರೋತ್ಸಾಹಧನ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿ ಪರಶುರಾಮ್, ಗ್ರಾಪಂ ಉಪಾಧ್ಯಕ್ಷೆ ಸಿಂಗಾರಿ, ಸದಸ್ಯರಾದ ರವಿ ಶೆಟ್ಟಿ, ಜಲಜಾ ಶೆಡ್ತಿ, ಶ್ರೀಮತಿ, ಮಂಜುಳಾ, ಪ್ರಸನ್ನಕುಮಾರ್, ವಿದ್ಯಾರ್ಥಿಮಿತ್ರ ಆಶಾ, ವಿದ್ಯಾರ್ಥಿ ಪ್ರತಿನಿಧಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮುಖ್ಯ ಶಿಕ್ಷಕರು, ಶಿಕ್ಷಕರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ನರಸಿಂಹ ಗಾಣಿಗ ಹರೆಗೋಡು ಪ್ರಸ್ತಾವನೆಗೈದರು. ಪಿಡಿ ರೂಪಾ ಗೋಪಿ ಕಾರ್ಯಕ್ರಮ ನಿರೂಪಿಸಿದರು.