ಬೈಂದೂರು: ಮಹಜರಿಗೆ ಹೋದ ವೃತ್ತನಿರೀಕ್ಷಕರಿಂದ ಮತ್ತೊಂದು ಎಫ್ಐಆರ್
ಟಿಪ್ಪರ್ ಪಲ್ಟಿಯಾಗಿ ಚಾಲಕ ಸಾವು ಪ್ರಕರಣಕ್ಕೆ ಟ್ವಿಸ್ಟ್
ಬೈಂದೂರು: ಮಣ್ಣು ಸಾಗಾಟದ್ದೆನ್ನಲಾದ ಟಿಪ್ಪರ್ ಒಂದು ನಿಯಂತ್ರಣ ಕಳೆದಕೊಂಡು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಬೈಂದೂರು ಠಾಣೆಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಹುಣಚನಿ ಜನ್ಮನೆ ಎಂಬಲ್ಲಿ ಇಳಿಜಾರು ತಿರುವು ರಸ್ತೆಯಲ್ಲಿ ಗುರುವಾರ ಸಂಜೆ ಘಟನೆ ನಡೆದಿದ್ದು, ಗುರುವಾರ ವಿಜಯ ಎಂಬುವರು KA-20-AB-4112 ನೋಂದಣಿಯ ಜ್ಯೋತಿ ವಿ ಶೆಟ್ಟಿ ಎಂಬುವರಿಗೆ ಸೇರಿದ ಟಿಪ್ಪರಿನಲ್ಲಿ ತಮ್ಮ ಸಂಬಂಧಿ ಪ್ರದೀಪ್ ಎಂಬುವರ ತೋಟಕ್ಕೆ ಮಣ್ಣು ಹಾಕಲು ಕಾರ್ಮಿಕರಾದ ಮಹಾಬಲ, ಹನುಮಂತನನ್ನು ಕರೆದುಕೊಂಡು ಕಾಲ್ತೊಡು ಕಡೆಯಿಂದ ಎಲ್ಲೂರಿಗೆ ಹೋಗುತ್ತಿದ್ದರು ಎಂಬುದಾಗಿ ವಿಜಯ ಎಂಬುವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈ ಅಪಘಾತದ ಪ್ರಕರಣದಲ್ಲಿ ಟಿಪ್ಪರ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.
ಬಳಿಕ ಶುಕ್ರವಾರ ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ ಅವರು ಘಟನಾ ಸ್ಥಳಕ್ಕೆ ಮಹಜರಿಗಾಗಿ ಹೋದ ವೇಳೆ ಮಣ್ಣು ಸಾಗಾಟದ ಟಿಪ್ಪರ್ ಅಲ್ಲವೆಂದೂ, ಮೃತ ಚಾಲಕ ಚಂದ್ರ, ಮಹಾಬಲ, ಹನುಮಂತು ಹಾಗೂ ಆರೋಪಿ ವಿಜಯ ರವರು ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶದಿಂದ ಕೆಂಪು ಕಲ್ಲನ್ನು ಟಿಪ್ಪರ್ ನಲ್ಲಿ ತುಂಬಿಸಿಕೊಂಡು ಬರುವಾಗ ಅಪಘಾತವಾಗಿರುವುದಾಗಿ ಕಂಡು ಬಂದಿರುವುದಾಗಿ ತಿಳಿದುಬಂದಿದೆ. ಅಲ್ಲದೇ ಘಟನಾ ಸ್ಥಳದಲ್ಲಿ ಬಿದ್ದಿರುವ 22 ಕೆಂಪು ಕಲ್ಲುಗಳು (ಅಂದಾಜು ಮೌಲ್ಯ ರೂ 500) ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿ ಬೈಂದೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.