ಕುಂದಾಪುರ: ಸರಣಿ ಅಪಘಾತ – ಬೈಕ್, ಸ್ಕೂಟರ್ ಗೆ ಕಾರು ಡಿಕ್ಕಿ : ಮೂವರಿಗೆ ಗಾಯ

ಕುಂದಾಫುರ: ಕಾರೊಂದು ಅತೀ ವೇಗವಾಗಿ ಬಂದು ಬೈಕ್ ಹಾಗೂ ಸ್ಕೂಟರ್ ಗೆ ಎದುರಿನಿಂದ ಸರಣಿ ಅಪಘಾತ ನಡೆಸಿದ ಪರಿಣಾಮ ಬೈಕ್ ಹಾಗೂ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮದ ಕನ್ಯಾನ ನಮ್ಮ ಭೂಮಿ ಬಳಿ ನೇರಳಕಟ್ಟೆ ತಲ್ಲೂರು ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಗಾಯಗೊಂಡವರನ್ನು ಸ್ಕೂಟರ್ ಸವಾರ ವಿಕಾಸ್, ಸಹ ಸವಾರ ಬಾಲಾಜಿ ಹಾಗೂ ಬೈಕ್ ಸವಾರ ಹರ್ಷವರ್ಧನ್ ಎಂದು ಗುರುತಿಸಲಾಗಿದೆ.
ಬೈಕ್ ಹಾಗೂ ಸ್ಕೂಟರ್ ನೇರಳಕಟ್ಟೆ ಕಡೆಯಿಂದ ತಲ್ಲೂರು ಕಡೆಗೆ ಹೋಗುತ್ತಿತ್ತು. ಇದೇ ಸಂದರ್ಭ ನಾಗೆಶ್ ಎಂಬಾತ ತನ್ನ ಕಾರಿನಲ್ಲಿ ತಲ್ಲೂರು ಕಡೆಯಿಂದ ನೇರಳಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದ. ನಮ್ಮ ಭೂಮಿ ಸಮೀಪ ಕಾರು ಬೈಕಿಗೆ ಡಿಕ್ಕಿ ಹೊಡೆದು ಬಳಿಕ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಸವಾರರು ರಸ್ತೆಗೆ ಬಿದ್ದಿದ್ದು, ಗಾಯಗಳಾಗಿವೆ. ಬಳಿಕ ಮೂವರನ್ನೂ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
