ಬೈಕ್ ಗಳ ಮುಖಾಮುಖಿ ಡಿಕ್ಕಿ – ಒಬ್ಬ ಸವಾರ ಸಾವು, ಇನ್ನೊಬ್ಬಗೆ ಗಾಯ
ಕುಂದಾಪುರ: ಎರಡು ಬೈಕ್ ಗಳು ಡಿಕ್ಕಿಯಾದ ಪರಿಣಾಮ ಒಬ್ಬ ಬೈಕ್ ಸವಾರ ಸಾವನ್ನಪ್ಪಿ ಇನ್ನೊಬ್ಬ ಸವಾರ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯೆಳಜಿತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಾ.ಹೆ 766 ಸಿ ರಸ್ತೆಬದಿಯಲ್ಲಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನನ್ನು ಹೂವಯ್ಯ(48) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಮನೋಜ್ ಎಂದು ಗುರುತಿಸಲಾಗಿದೆ.
ಮನೋಜ್ ತನ್ನ ಪಲ್ಸರ್ ಬೈಕಿನಲ್ಲಿ ಬೈಂದೂರು ಕಡೆಯಿಂದ ಯೆಳಜಿತ್ ಕಡೆಗೆ ರಾ.ಹೆ 766 ಸಿ ರಸ್ತೆಯಲ್ಲಿ ಬರುತ್ತಿದ್ದರು. ಹೂವಯ್ಯ ಕೊಲ್ಲೂರು ಕಡೆಯಿಂದ ಯೆಳಜಿತ್ ಕಡೆಗೆ ತನ್ನ ಹೀರೋ ಹೋಂಡಾ ಬೈಕಿನಲ್ಲಿ ಬರುತ್ತಿದ್ದರು. ಅಪಘಾತದ ಪರಿಣಾಮ ಹೂವಯ್ಯ ಅವರ ಮುಖಕ್ಕೆ, ತಲೆಗೆ , ಹಣೆಗೆ , ಕಾಲಿನ ಮೊಣಗಂಟಿಗೆ ತೀವ್ರ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ಇನ್ನೊಬ್ಬ ಬೈಕ್ ಸವಾರ ಮನೋಜ್ ನಿಗೂ ಮೂಗು ಮತ್ತು ಮುಖಕ್ಕೆ ರಕ್ತಗಾಯವಾಗಿದ್ದು ಗಾಯಾಳುಗಳನ್ನು ಸಮೀಪದ ನಿವಾಸಿ ರಾಜೇಶ್ ಅವರು ತನ್ನ ಕಾರಿನಲ್ಲಿ ಬೈಂದೂರು ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಹೂವಯ್ಯ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.