ಉಡುಪಿ: ನಾಳೆಯಿಂದ ಭಾವನಾ ಪೌಂಡೇಶನ್ ಸಹಯೋಗದಲ್ಲಿ ಸಾಂಝಿ ಪೇಪರ್ ಕಲಾಕೃತಿಗಳ ಪ್ರದರ್ಶನ
ಉಡುಪಿ: ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ,ಉಡುಪಿಯ ಮಧುರಂ ವೈಟ್ ಲೋಟಸ್ ಹೋಟೇಲ್ನ ಸಹಯೋಗದಲ್ಲಿ ಜನವರಿ 22 ಹಾಗೂ 23ರಂದು ಬೃಂದಾವನದಿಂದ ಉಡುಪಿಯೆಡೆಗೆ ಶೀರ್ಷಿಕೆಯಡಿಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶ್ರೀರಾಮ ಸೋನಿಯವರ ಮಥುರಾದ ಸಾಂಝಿ ಪೇಪರ್ ಕಲಾಕೃತಿಗಳ ಕಲಾ ಪ್ರದರ್ಶನವನ್ನು ಹತ್ತು ಮೂರು ಇಪ್ಪತ್ತೆಂಟು, ಬಡಗುಪೇಟೆಯ ಗ್ಯಾಲರಿಯಲ್ಲಿ ಆಯೋಜಿಸುತ್ತಿದೆ ಎಂದು ಭಾವನಾ ಪೌಂಡೇಶನ್ ಮುಖ್ಯಸ್ಥ ಕಲಾವಿದ ಡಾ. ಜನಾರ್ದನ ಹಾವಂಜೆ ಹೇಳಿದ್ದಾರೆ.

ನಾಳೆ ಸಂಜೆ 4.30ಕ್ಕೆ ಉಡುಪಿಯ ಆರ್ಕಿಟೆಕ್ಟ್ ಶ್ರೀಜಾ ಜಯಕುಮಾರ್ ಅವರು ಕಲಾಪ್ರದರ್ಶನವನ್ನು ಉದ್ಘಾಟಿಸಲಿದ್ದು ಫೌಂಡೇಶನ್ನ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿರುತ್ತಾರೆ. ಭಾರತೀಯ ದೇಶೀಯ ಕಲೆಯಾದ ಮಥುರಾದ ಸಾಂಝಿ ಕಲೆಯು ಪೇಪರ್ ಕಟ್ಟಿಂಗ್ ಕಲೆಯಾಗಿದ್ದು, ಟ್ರೀ ಆಫ್ ಲೈಫ್, ಕೃಷ್ಣನ ಲೀಲೆಗಳು, ಬುದ್ಧ, ನಿಸರ್ಗ ಚಿತ್ರಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದು, ಒಳಾಂಗಣ ವಿನ್ಯಾಸದಲ್ಲಿ ಬಹು ಮಹತ್ವಪೂರ್ಣ ಸ್ಥಾನವನ್ನು ಅಲಂಕರಿಸಿದೆ. ಈ ಕಲಾಪ್ರದರ್ಶನವು ಜನವರಿ 26ರ ತನಕ ನಡೆಯಲಿದ್ದು, ಪ್ರತಿದಿನ ಸಂಜೆ 3ರಿಂದ 7 ಗಂಟೆಯವರೆಗೆ ವೀಕ್ಷಣೆಗೆ ಅವಕಾಶವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿ 25ರ ಶನಿವಾರ ಬಡಗುಪೇಟೆಯ ಗ್ಯಾಲರಿಯಲ್ಲಿ ಜನಪದ ಸರಣಿ ಕಲಾ ಕಾರ್ಯಾಗಾರದ ಹದಿನಾರನೇ ಆವೃತ್ತಿ ನಡೆಯಲಿದ್ದು, ಬೆಳಿಗ್ಗೆ 9.30ಕ್ಕೆ ವೈಟ್ ಲೋಟಸ್ ಹೋಟೆಲ್ನ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಭಾವನಾ ಪ್ರತಿಷ್ಠಾನದ ಸಂಸ್ಥಾಪಕ ಸದಸ್ಯೆ ವಿದುಷಿ ಅಕ್ಷತಾ ವಿಶುರಾವ್ ಉಪಸ್ಥಿತರಿರುತ್ತಾರೆ. ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಸಾಂಝಿ ಕಲೆ ಹಾಗೂ ನೀರಿನ ಮೇಲೆ ರಂಗೋಲಿಯನ್ನು ಹಾಕಿ ಕೃಷ್ಣನನ್ನು ಆರಾಧಿಸುವ ಜಲ ಸಾಂಝಿ ಕಲೆಯನ್ನು ಈ ಬಾರಿ ಪರಿಚಯಿಸಲಾಗುತ್ತಿದೆ. ಮಥುರಾದ ಶ್ರೀರಾಮ ಸೋನಿ ಅವರು ಕಾರ್ಯಾಗಾರ ನಡೆಸಿಕೊಡಲಿದ್ದು, ಶನಿವಾರ ಸಾಂಝಿ ಮತ್ತು ಭಾನುವಾರ ಜಲ ಸಾಂಝಿ ಕಾರ್ಯಾಗಾರಗಳು ನಡೆಯಲಿದೆ. ಎಂದು ಸಂಯೋಜಕ ಡಾ. ಜನಾರ್ದನ ಹಾವಂಜೆ ತೀಲಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9845650544 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

